*ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಬೆಳಕಿಗೆ*

ಪ್ರಗತಿವಾಹಿನಿ ಸುದ್ದಿ: ಐಷಾರಾಮಿ ಮನೆಯಲ್ಲಿ ಭ್ರೂಣಹತ್ಯೆ ಕುಕೃತ್ಯ ನಡೆಯುತ್ತಿರುವ ಪ್ರಕರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ಆರೋಗ್ಯ ಇಲಾಖೆ ಡಿಡಿ ವಿವೇಕ್, ಮಂಡ್ಯ ಡಿಎಚ್ಓ ಮೋಹನ್, ಮೈಸೂರು ಡಿಎಚ್ಓ ಪಿ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿಣ ಭ್ರೂಣ ಹತ್ಯೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರು ತಾಲೂಕಿನ ಹನುಗನಹಳ್ಳಿಯ ಮನೆಯೊಂದರಲ್ಲಿ ಭ್ರೂಣ ಪತ್ತೆ ಕಾರ್ಯ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಐಷಾರಾಮಿ ಮನೆಯಲ್ಲಿ ಕೃತ್ಯ ಎಸಗುತ್ತಿದ್ದ ಕಿಡಿಗೇಡಿಗಳು ಗ್ರಾಮೀಣ ಭಾಗದ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದರು. ಲಕ್ಷ ಲಕ್ಷ ಹಣ ಪಡೆದು ಸ್ಕ್ಯಾನಿಂಗ್ ಮಾಡುತ್ತಿದ್ದ ತಂಡವು, ಹೊಟ್ಟೆಯಲ್ಲಿರುವ ಮಗುವಿನ ಲಿಂಗವನ್ನು ಬಹಿರಂಗಪಡಿಸುತ್ತಿದ್ದರು.
ನಂತರ ಹೆಣ್ಣು ಮಗುವಾದರೆ ಗರ್ಭಪಾತ ಮಾಡುವ ಕೃತ್ಯ ನಡೆಯುತ್ತಿತ್ತು. ಕೃತ್ಯಕ್ಕೆ ಬಳಸಿದ್ದ ಪರಿಕರಗಳ ಸಮೇತ ವಶ ಪಡಿಸಿಕೊಳ್ಳಲಾಗಿದೆ.