
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರಿಯ ಸಾಹಿತಿ, ರಂಗಕರ್ಮಿಶಿರೀಷ ಜೋಶಿಯವರಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದ್ದು, ಮುಖ್ಯಮಂತ್ರಿ ಸಿದ್ದರಾಮ್ಯ ಮೈಸೂರಿನಲ್ಲಿ ಪ್ರದಾನ ಮಾಡಿದರು.

ವಿಶಾಲ್ ರಾಜ್ ನಿರ್ದೇಶಿಸಿರುವ ಸಾವಿತ್ರಿಬಾಯಿ ಫುಲೆ ಚಲನಚಿತ್ರದ ಸಂಭಾಷಣೆಗಾಗಿ ಶಿರೀಷ್ ಜೋಶಿಯವರಿಗೆ 2018 -19ನೇ ಸಾಲಿನ ಪ್ರಶಸ್ತಿ ಲಭಿಸಿದೆ.
ಮೈಸೂರಿನ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ನಡೆದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಸಂಭಾಷಣೆಕಾರ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನವೆಂಬರ್ 3ರಂದು ಪ್ರದಾನ ಮಾಡಿದರು.
ಶಿರೀಷ ಜೋಶಿಯವರು 2018ರಲ್ಲಿ ಬಿಡುಗಡೆಯಾದ ಸಾವಿತ್ರಿಬಾಯಿ ಫುಲೆ ಚಲನಚಿತ್ರಕ್ಕಾಗಿ ಸಂಭಾಷಣೆ ಬರೆದಿದ್ದರು. ಈ ಪ್ರಶಸ್ತಿಯು 100 ಗ್ರಾಂ ಬೆಳ್ಳಿಯ ಪದಕ, ಸ್ಮರಣಿಕೆ, 20 ಸಾವಿರ ರೂ. ನಗದು, ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿದೆ. ಡಾ.ಸರಜೂ ಕಾಟ್ಕರ್ ಅವರ ಸಾವಿತ್ರಿಬಾಯಿ ಫುಲೆ ಕಾದಂಬರಿಯನ್ನಾಧರಿಸಿದ ಈ ಚಲನಚಿತ್ರವನ್ನು ವಿಶಾಲರಾಜ್ ಅವರು ನಿದೇಶಿಸಿದ್ದು ನಾಗರಾಜ ಆದವಾನಿಯವರ ಛಾಯಾಗ್ರಹಣವಿದೆ. ಸತೀಶ ಕುಲಕರ್ಣಿ ಸಾಹಿತ್ಯ ಒದಗಿಸಿದ್ದಾರೆ. ಬೆಳಗಾವಿ ಜಿಲ್ಲೆಯವರೇ ಆದ ಯಾದವಾಡದ ಬಸವರಾಜ ಭೂತಾಳಿಯವರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಇವರೆಲ್ಲರ ಸಹಕಾರವನ್ನು ಶಿರೀಷ ಜೋಶಿ ಈ ಸಂದರ್ಭದಲ್ಲಿ ಸ್ಮರಿಸಿಕೊಂಡು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಬೆಳಗಾವಿಯ ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ, ಉಪಾಧ್ಯಕ್ಷ ಎಂ.ಕೆ.ಹೆಗಡೆ, ಶೈಲಜಾ ಭಿಂಗೆ, ಡಾ.ರಾಮಕೃಷ್ಣ ಮರಾಠೆ ಹಾಗೂ ಎಲ್ಲ ಸದಸ್ಯರು ಶಿರೀಷ ಜೋಶಿಯವರನ್ನು ಅಭಿನಂದಿಸಿದ್ದಾರೆ. ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ನಿರ್ಮಿಸಲಾದ ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಅನೇಕ ನಟ-ನಟಿಯರು ಅಭಿನಯಿಸಿದ್ದು, ಬೆಳಗಾವಿ ಜಿಲ್ಲೆಯ ಪಾಚ್ಛಾಪುರ, ಎಲಿಮುನವಳ್ಳಿ, ಹುದಲಿ, ಗೋಕಾಕ ಫಾಲ್ಸ್ ಮುಂತಾದೆಡೆಗಳಲ್ಲಿ ಈ ಚಲನಚಿತ್ರದ ಚಿತ್ರೀಕರಣ ನಡೆದಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.




