*ಕನೇರಿ ಮಠದ ಶ್ರೀಗಳ ಜಿಲ್ಲಾ ಪ್ರವೇಶ ನಿರ್ಬಂಧ ತೆರವುಗೋಳಿಸಲು ಒತ್ತಾಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಯವರ ಮೇಲಿರುವ ಜಿಲ್ಲಾ ಪ್ರವೇಶ ನಿರ್ಬಂಧ ತೆರವುಗೋಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಡಾ. ರವಿ ಪಾಟೀಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ವೀರಶೈವ ಲಿಂಗಾಯತ ಸಮಾಜವು ಅತಿಪ್ರಾಚೀನ ಪರಂಪರೆಯುಳ್ಳದ್ದಾಗಿದ್ದು, ಸುದೀರ್ಘ ಕಾಲದಿಂದಲೂ ಸಮಾಜವನ್ನು ಬೆಸೆಯುತ್ತಾ ಭಕ್ತಿ ಮಾರ್ಗದಲ್ಲಿ ಅವರನ್ನು ಮುನ್ನಡೆಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ರಾಜಕೀಯ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ಈ ಸಮಾಜವನ್ನು ಕೆಲವರು ಒಡೆಯುಲು ಪ್ರಯತ್ನಿಸಿದ್ದಾರೆ. ಅವರಿಗೆ ಸಹಕಾರಿಯಾಗಿ ಕೆಲವು ಎಡಪಂಥೀಯ ವಿಚಾರಧಾರೆಯವರೂ ನಿಂತಿದ್ದಾರೆ. ಇವರು ಹಿಂದೂಧರ್ಮವನ್ನು, ಹಿಂದೂ ದೇವ-ದೇವಿಯರನ್ನು ಅವಹೇಳನ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬಹಿರಂಗ ಸಮಾವೇಶಗಳಲ್ಲಿ ನಿಂದಿಸುತ್ತಾರೆ.
ಬಸವಣ್ಣನವರ ಹೆಸರು ಹೇಳಿ ಮಾಂಸ ತಿನ್ನುವಂತೆ, ಮದ್ಯ ಕುಡಿಯುವಂತೆ ಪ್ರಚೋದಿಸುವ ಇವರುಗಳ ಕುರಿತು ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳು ಆಡಿದರೆನ್ನಲಾದ ಮಾತುಗಳನ್ನು ಮುಂದಿಟ್ಟುಕೊಂಡು ಸರ್ಕಾರ ಅವರಿಗೆ ಬಿಜಾಪುರ ಜಿಲ್ಲೆಗೆ ನಿಷೇಧ ಹೇರಿರುವುದನ್ನು ಖಂಡಿಸುತ್ತದೆ.
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ತಮ್ಮ ನೈಸರ್ಗಿಕ ಕೃಷಿಯ ಚಟುವಟಿಕೆಗಳ ಮೂಲಕ, ಜನೋಪಯೋಗಿ ಸೇವಾ ಚಟುವಟಿಕೆಗಳ ಮೂಲಕ, ಗುರುಕುಲ ಪದ್ಧತಿಯ ಶಿಕ್ಷಣದ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಸಮಾಜದ ನಿರ್ಮಾಣಕ್ಕೆ ನಿಸ್ವಾರ್ಥವಾಗಿ, ಬಸವತತ್ವಕ್ಕೆ ಪೂರಕವಾಗಿ ಹಗಲು-ರಾತ್ರಿ ದುಡಿಯುತ್ತಿರುವ ಸಂತರೊಬ್ಬರು ‘ದಂಗೆಗೆ ಕಾರಣವಾಗಲಿದ್ದಾರೆ’ ಎಂಬ ಸರ್ಕಾರದ ಆರೋಪವೇ ನಮ್ಮೆಲ್ಲರನ್ನು ಗಾಬರಿಗೊಳಿಸಿದೆ. ಅಂತಹುದರಲ್ಲಿ ಈ ಸುಳ್ಳು ಆರೋಪದ ಆಧಾರದ ಮೇಲೆ ಅವರನ್ನು ಜಿಲ್ಲಾ ಪ್ರವೇಶಕ್ಕೆ ನಿರ್ಬಂಧಿಸಿರುವುದು ಇನ್ನಷ್ಟು ಅಸಹನೆ ಉಂಟುಮಾಡಿದೆ. ಸಮಾಜದ ಸ್ವಾಸ್ಥ್ಯವನ್ನು ಈ ಮೂಲಕ ಹದಗೆಡವಂತಾಗಿದೆ.
ನಾವೆಲ್ಲರೂ ನಾಡು ಕಟ್ಟುವ ಕೆಲಸ ಮಾಡಬೇಕು. ಒಡೆಯುವ ನೇತೃತ್ವ ವಹಿಸಬಾರದು. ನಾಡಿನ ಪರಂಪರೆ-ಸಂಸ್ಕೃತಿಗೆ ಗೌರವ ದಕ್ಕುವಂತೆ ಮಾಡಬೇಕು. ಅದರ ಮುಂದಾಳುಗಳಿಗೆ ಅವಮಾನ ಮಾಡುವುದಲ್ಲ. ಹೀಗಾಗಿಯೇ ಈ ನಗರದ ನಿವಾಸಿಗಳಾದ ನಾವು ಕಾಡಸಿದ್ಧೇಶ್ವರ ಸ್ವಾಮೀಜಿಯವರಿಗೆ ನಗರ ಪ್ರವೇಶಕ್ಕೆ ನಿರ್ಬಂಧ ಹೇರಿರುವ ನಿರ್ಣಯದಿಂದ ಹಿಂದೆ ಸರಿಯಬೇಕಲ್ಲದೇ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆದು ಹಿಂದೂ ಸಮಾಜದಲ್ಲಿ ಒಡಕು ತರುವ ಪ್ರಯತ್ನ ಮಾಡುತ್ತಿರುವ ಕರಳ ಶಕ್ತಿಯನ್ನು ನಿಯಂತ್ರಿಸಬೇಕು.
ಮುಖ್ಯಮಂತ್ರಿಗಳು ಈ ಕುರಿತಂತೆ ಮುತುವರ್ಜಿ ವಹಿಸಿ ಕರ್ನಾಟಕವನ್ನು ಉರಿಯುವ ಗೂಡಾಗಿಸದೇ ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿ ಉಳಿಯಲು ಬಿಡಬೇಕೆಂದು ನಮ್ಮ ಆಗ್ರಹಿಸಿದರು.




