*ಚುನಾವಣೆಯಲ್ಲಿ ಗೆದ್ದರೂ ಪಕ್ಷದ ಮೂವರು ನಾಯಕರನ್ನು ಅಮಾನತು ಮಾಡಿದ ಬಿಜೆಪಿ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಬಿಹಾರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಸಂಭ್ರಮದ ನಡುವೆಯೂ ತನ್ನ ಮೂವರು ಪ್ರಮುಖ ನಾಯಕರ ಅಮಾನತು ಮಾಡಿದ್ದು, ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಸಂತಸ ತಣಿಯುವ ಮೊದಲೇ, ಬಿಜೆಪಿ ತನ್ನದೇ ಮೂವರು ಗಣ್ಯ ನಾಯಕರನ್ನು ಅಮಾನತುಗೊಳಿಸಿ ದೊಡ್ಡ ಆಘಾತ ನೀಡಿದೆ. ಚುನಾವಣಾ ಫಲಿತಾಂಶದ ಮರುದಿನವೇ ಪಕ್ಷವು ಈ ದಿಟ್ಟ ಕ್ರಮಕ್ಕೆ ಮುಂದಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್, ಬಿಜೆಪಿ ಎಂಎಲ್ಸಿ ಅಶೋಕ್ ಅಗರ್ವಾಲ್ ಮತ್ತು ಕಟಿಹಾರ್ ಮೇಯರ್ ಉಷಾ ಅಗರ್ವಾಲ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂಬ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.
ಈ ಮೂವರು ನಾಯಕರು ಪಕ್ಷದ ಶಿಸ್ತಿಗೆ ಧಕ್ಕೆ ತರುವಂತಹ ನಡೆ-ನುಡಿಗಳನ್ನು ಪದೇ ಪದೇ ಪ್ರದರ್ಶಿಸುತ್ತಿದ್ದರು. ಪಕ್ಷದ ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆಯಲ್ಲಿ ಅಮಾನತು ಕ್ರಮ ಅನಿವಾರ್ಯವಾಯಿತು ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ವಾರದೊಳಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಅವರಿಗೆ ಅಧಿಕೃತ ನೋಟಿಸ್ ನೀಡಲಾಗಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಪಕ್ಷದ ವಿರುದ್ಧ ಮುಜುಗರ ತರುವಂತಹ ಹೇಳಿಕೆಗಳು, ಬಂಡಾಯ ಪ್ರವೃತ್ತಿ ಹಾಗೂ ಗೊಂದಲ ಸೃಷ್ಟಿಸಿದ ಆರೋಪಗಳು ಈ ಮೂವರ ಮೇಲೂ ಕೇಳಿಬಂದಿದ್ದವು. ಮಾಜಿ ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಅವರು ಪಕ್ಷದ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದರೆಂದು ಮೂಲಗಳು ತಿಳಿಸಿವೆ.
ಇದೇ ರೀತಿ, ಎಂಎಲ್ಸಿ ಅಶೋಕ್ ಅಗರ್ವಾಲ್ ಅವರ ಪುತ್ರ, ವಿಕಾಸಶೀಲ ಇನ್ಸಾನ್ ಪಾರ್ಟಿ (VIP) ಯಿಂದ ಟಿಕೆಟ್ ಪಡೆದು ಕಟಿಹಾರ್ನಲ್ಲಿ ಬಿಜೆಪಿ ಅಭ್ಯರ್ಥಿಗೆ ಎದುರಾಗಿ ಕಣಕ್ಕಿಳಿದಿರುವುದು ಪಕ್ಷದ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.



