*ಬೆಳಗಾವಿ ಅಧಿವೇಶನದ ವೇಳೆಯೇ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆಗೆ ಕರೆ ಕೊಟ್ಟ ಜಯಮೃತ್ಯುಂಜಯ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ: ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತೆ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಯಮೃತ್ಯುಂಜಯ ಸ್ವಾಮೀಜಿ, ಡಿಸೆಂಬರ್ ೮ರಿಂದ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಲಿದೆ. ಡಿಸೆಂಬರ್ 10ರಂದು ಪಂಚಮಸಾಲಿ ಸಮುದಾಯದಿಂದ ಮೌನ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ನಾವು 5 ವರ್ಷದಿಂದ ಹೋರಾಟ ಮಾಡ್ತಿದ್ದೇವೆ. ಪ್ರತಿ ವರ್ಷ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲು ಹೋರಾಟ ಮಾಡ್ತಿದ್ದೇವೆ. 2012 ರಲ್ಲಿ ಅಧಿವೇಶನ ವೇಳೆ ಮುತ್ತಿಗೆ ಹಾಕಿದಾಗಲೂ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಸ್ಪಂದಿಸಲಿಲ್ಲ. 2020 ರಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ರು ಯಡಿಯೂರಪ್ಪ ಸರ್ಕಾರ ಸ್ಪಂದಿಸಲಿಲ್ಲ. ಕಳೆದ ಅಧಿವೇಶನದಲ್ಲಿ ಪಂಚಮಸಾಲಿಗಳ ಸಿಎಂ ಸಿದ್ದರಾಮಯ್ಯ ಸರ್ಕಾರ ಲಾಠಿ ಚಾರ್ಜ್ ಮಾಡಿದೆ. ಪೊಲೀಸರು ನಿರ್ದಯವಾಗಿ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಡಿಸೆಂಬರ್ 10 ಪಂಚಮಸಾಲಿಗಳಿಂದ ಮೌನ ಪ್ರತಿಭಟನೆ ಮಾಡ್ತಿವಿ ಎಂದರು.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಬಾಯಿಗೆ, ಕೈಗೆ ಕಪ್ಪು ಪಟ್ಟಿಕೊಂಡು ಮೌನ ಪ್ರತಿಭಟನೆ ಮಾಡ್ತಿವಿ. ಜಿಲ್ಲಾಡಳಿತ ತೋರಿಸಿದ ಸ್ಥಳದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡ್ತಿವಿ
ಬೆಳಗಾವಿಯ ಗಾಂಧಿ ಭವನದಿಂದ ಮೌನ ಪ್ರತಿಭಟನೆ ಆರಂಭವಾಗಲಿದೆ. ಲಿಂಗಾಯತ ಪಂಚಮಸಾಲಿ ಸಮಾಜದ ಮೇಲೆ ಆಗಿರೋ ದೌರ್ಜನ್ಯ ದಿನವಾಗಿ ಪ್ರತಿಭಟನೆ ಮಾಡಲಾಗುವುದು ಎಂದರು.
ಸರ್ಕಾರದಲ್ಲಿ ಇದ್ದವರು ಮೀಸಲಾತಿ ವಿಚಾರ ಮಾತನಾಡಲು ಆಗದಿದ್ದರೆ ಕನಿಷ್ಠ ಲಾಠಿ ಜಾರ್ಚ್ ಘಟನೆಯನ್ನಾದ್ರು ಖಂಡಿಸುವಂತೆ ಮನವಿ ಮಾಡಿದ್ದೇವೆ. ಬಿಜೆಪಿ ಸರ್ಕಾರದಲ್ಲಿದ್ದ ಪಂಚಮಸಾಲಿ ಶಾಸಕರು ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದರು. ಆದ್ರೆ ಕಾಂಗ್ರೆಸ್ ಸರ್ಕಾರದಲ್ಲಿ ಇರೋ ಪಂಚಮಸಾಲಿ ಶಾಸಕರು ಮಾತನಾಡುತ್ತಿಲ್ಲ ಎನ್ನುವುದು ದುರಂತ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಲ್ಲಿ ಇರೋ ಪಂಚಮಸಾಲಿ ಶಾಸಕರ ಬಗ್ಗೆ ಅಸಮಾಧಾನ ಹೊರಹಾಕಿದ ಸ್ವಾಮೀಜಿ, ಸರ್ಕಾರದಲ್ಲಿ ಇರೋ ಸಚಿವರು, ಶಾಸಕರ ಮನೆ ಬಾಗಿಲಿಗೆ ಹೋಗಿ ಮನವಿ ಮಾಡಿದ್ರು ಸ್ಪಂದಿಸುತ್ತಿಲ್ಲ ಎಂದು ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರದಲ್ಲಿ ಸ್ವಾಮೀಜಿಗಳು ಅಸಹಾಯಕತೆ ಹೊರಹಾಕಿದರು.



