Belagavi NewsBelgaum NewsKannada NewsKarnataka NewsPolitics

*ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಗೆ ಆದ್ಯತೆ ಸಚಿವ ಪ್ರಿಯಾಂಕ್ ಖರ್ಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಪ್ರದೇಶದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ರಾಜ್ಯ ಮಟ್ಟದಲ್ಲಿ ಏಜೆನ್ಸಿ ನೇಮಕಕ್ಕೆ ಇಲಾಖೆಯಿಂದ ಪ್ರಯತ್ನ ನಡೆಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಹಿರೇಕೆರೂರು ಶಾಸಕ ಯು.ಬಿ.ಬಣಕಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶಾಸಕರು, ಸಂಸದರು ಸೇರಿದಂತೆ ಸಾಮಾಜಿಕ ಹೊಣೆಗಾರಿಕೆ ಅನುದಾನದಲ್ಲಿ ಬಹಳಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ, ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ. ನಿರ್ವಹಣೆ ಅವಧಿ ಮುಗಿದ ನಂತರ ಇವುಗಳ ನಿರ್ವಹಣೆಗೆ ತೊಂದರೆ ಎದುರಾಗಿದೆ. ಈ ಹಿನ್ನಲೆಯಲ್ಲಿ ದೇಶದ ಪ್ರತಿಷ್ಠಿತ ಕುಡಿಯುವ ನೀರಿನ ಘಟಕಗಳ ತಯಾರಿಕಾ ಕಂಪನಿಗಳಲ್ಲಿ ಒಬ್ಬರಿಗೆ ನಿರ್ವಹಣೆ ಗುತ್ತಿಗೆ ನೀಡಲು ಕೋರಲಾಗಿದೆ. ಆದರೆ ಯಾವ ಕಂಪನಿಗಳು ನಿರ್ವಹಣೆ ಮಾಡಲು ಮುಂದೆ ಬರುತ್ತಿಲ್ಲ. ಸರ್ಕಾರ ತನ್ನ ಪ್ರಯತ್ನವನ್ನು ಮುಂದುವರಿಸಿದ್ದು, ಶೀಘ್ರದಲ್ಲಿಯೇ ಈ ಸಮಸ್ಯೆಗೆ ಬಗೆಹರಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ರೂ.6 ಕೋಟಿ ಪ್ರಸ್ತಾವನೆ ಮಂಜೂರಾತಿ

Home add -Advt

ಹಾವೇರಿ ಜಿಲ್ಲೆಯಿಂದ ರೂ.6 ಕೋಟಿ ಮೊತ್ತದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ಮಂಜೂರಾತಿ ಕೋರಿ ಇಲಾಖೆಗೆ ಪ್ರಸ್ತಾವನೆ ಬಂದಿದೆ. ಈ ಪ್ರಸ್ತಾವನೆ ಪರಿಶೀಲನೆ ಹಂತದಲ್ಲಿದ್ದು ಸದ್ಯದಲ್ಲಿಯೇ ಮಂಜೂರಾತಿ ನೀಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಯು.ಬಿ.ಬಣಕಾರ್ ಅವರಿಗೆ ತಿಳಿಸಿದರು.

9 ಗ್ರಾಮಗಳಲ್ಲಿ ಪ್ಲೋರೈಡ್ ಪತ್ತೆ

ಹಾವೇರಿ ಜಿಲ್ಲೆಯ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಬರುವ 685 ಗ್ರಾಮಗಳ ಕುಡಿಯುವ ನೀರಿನ ಗುಣಮಟ್ಟದ ಪರಿಶೀಲನೆ ನಡೆಸಲಾಗಿದೆ. ಈ ಪೈಕಿ ಹಾವೇರಿ ತಾಲ್ಲೂಕಿನ ಬೆಳವಿಗಿ, ಮರಡೂರ, ತೆರೆದಹಳ್ಳಿ, ಗುಯಿಲಗುಂದಿ, ಮೇವುಂಡಿ, ಗೂಡೂರು, ಮರೋಳ, ದೇವಗಿರಿ ಹಾಗೂ ಶಿಗ್ಗಾಂವ್ ತಾಲ್ಲೂಕಿನ ಕಂಕಣವಾಡ ಗ್ರಾಮಗಳ ಮಾದರಿಯಲ್ಲಿ ಪ್ಲೋರೈಡ್ ಅಂಶ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಹಾವೇರಿ ತಾಲ್ಲೂಕಿನ 8 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ಮೇಲ್ಮೈ ನೀರನ್ನು ಒದಗಿಸಲಾಗುತ್ತಿದೆ. ಈ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಕಂಕಣವಾಡಿ ಗ್ರಾಮದಲ್ಲಿ ಪರ್ಯಾಯ ಕೊಳವೆ ಬಾವಿ ನೀರು ಮತ್ತು ಪಕ್ಕದ ಹನುಮರಹಳ್ಳಿ ಶುದ್ದ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. 

ಎಲ್ಲಾ ಜಿಲ್ಲಾ ಪಂಚಾಯಿತಿಗಳಲ್ಲಿ ಪ್ರತಿ ತಿಂಗಳು ನೀರಿನ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ಸುಮಾರು 6.50 ಲಕ್ಷ ನೀರಿನ ಮಾದರಿಗಳನ್ನು ರಾಜ್ಯಾದ್ಯಂತ ಪರೀಕ್ಷಿಸಲಾಗಿದೆ. ಗ್ರಾಮಗಳಿಗೆ ನೀರು ಪರೀಕ್ಷಾ ಕಿಟ್ ಒದಗಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಷ್ಟ ಪಡಿಸಿದರು.

ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ, ಶಿರಹಟ್ಟಿ ಶಾಸಕ ಡಾ.ಚಂದ್ರುಲಮಾಣಿ ಅವರು ಕೆಟ್ಟು ನಿಂತು ಹೋದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಗ್ರಾಮ ಪಂಚಾಯಿತಿಗಳಿಗೆ ಅನುದಾನ ನೀಡುವಂತೆ ಸಚಿವರಲ್ಲಿ ಕೋರಿದರು. ಇದಕ್ಕೆ ಇತರೆ ಶಾಸಕರು ಸಹ ಧ್ವನಿಗೂಡಿಸಿದರು.

ಗ್ರಾಮ ಪಂಚಾಯಿತಿಗಳಿಂದ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಯಾವುದೇ ತೊಂದರೆಯಾಗಿಲ್ಲ. ಸರ್ಕಾರದಿಂದ ನಿರ್ವಹನೆ ಅನುದಾನ ನೀಡಲಾಗಿದೆ. ಆದರೆ ಶಾಸಕರು, ಸಂಸದರು ಇತರೆ ಅನುದಾನಗಳಡಿ ನಿರ್ಮಿಸಿರುವ ಘಟಕಗಳ ನಿರ್ವಹಣೆ ತೊಂದರೆ ಉಂಟಾಗಿದ್ದು, ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಡುವ ಭರವಸೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ನೀಡಿದರು.  

Related Articles

Back to top button