
ಪ್ರಗತಿವಾಹಿನಿ ಸುದ್ದಿ: ಮನೆ ಕಟ್ಟಲು ಅಡಿಪಾಯ ತೆಗೆಯುತ್ತಿದ್ದಾಗ ಅಪಾರ ಪ್ರಮಾಣದ ನಿಧಿ ಪತ್ತೆಯಾಗಿರುವ ಘಟನೆ ನಡೆದಿದೆ. ನಿಧಿ ನೋಡಲು ಗ್ರಾಮಕ್ಕೆ ಜನ ಸಾಗರವೇ ಹರಿದು ಬರುತ್ತಿದೆ.
ರಾಜ ಮಹಾರಾಜರು ವಾಸವಾಗಿದ್ದರು ಎನ್ನಲಾದ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ ಬಸವರಾಜ್ ರಿತ್ತಿ ಎಂಬುವವರ ಜಾಗದಲ್ಲಿ ನಿಧಿ ಪತ್ತೆಯಾಗಿದೆ. ಪಾಯ ತೆಗೆಯುತ್ತಿದ್ದಾಗ ಮಣ್ಣಿನಡಿಯಲ್ಲಿ ತಂಬಿಗೆಯೊಂದರಲ್ಲಿ ನಿಧಿ ಪತ್ತೆಯಾಗಿದೆ. ಪುರಾತನ ಕಾಲದ ಹಾರ ಹಾಗೂ ಕೆಲ ವಸ್ತುಗಳು ಸಿಕಿದ್ದು, ಅಂದಾಜು ಒಂದು ಕೆಜಿಯಷ್ಟು ನಿಧಿ ಸಿಕ್ಕಿದೆ ಎಂದು ತಿಳಿದುಬಂದಿದೆ.
ನಿಧಿ ಸಿಕ್ಕ ಬಗ್ಗೆ ಮನೆಯವರು ತಹಶಿಲ್ದಾರ್ ಹಾಗೂ ಪೊಲೀಸರಿಗೆ ತಿಳಿಸಿದ್ದು, ಲಕ್ಕುಂಡಿ ಗ್ರಾಮಕ್ಕೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ. ಕುಟುಂಬದವರು ಸಿಕ್ಕ ನಿಧಿಯನ್ನು ಗ್ರಾಮದ ಗಣೇಶ ದೇವಾಲಯದಲ್ಲಿ ಇಟ್ಟಿದ್ದಾರೆ. ದೇವಾಲಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.



