*ಬೆಳಗಾವಿ ಜಿಲ್ಲೆಗೆ 11 ಕೃಷಿ ಪ್ರಶಸ್ತಿ ಪ್ರಧಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದ ಕೃಷಿ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಲು ರೈತರ ಶ್ರಮ ಮತ್ತು ಸಕ್ರಿಯ ಪಾಲುದಾರಿಕೆ ಕಾರಣವಾಗಿರುತ್ತದೆ. ಅಂತಹ ರೈತ/ರೈತ ಮಹಿಳೆಯರನ್ನು ಗುರುತಿಸಲು ಹಾಗೂ ಪ್ರೋತ್ಸಾಹಿಸಲು ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಆಯ್ಕೆ ಮಾಡಲಾದ ಬೆಳೆಗಳಲ್ಲಿ ಸ್ಪರ್ಧೆ ನಡಿಸಿ ಪ್ರತಿ ಬೆಳೆಗೂ 3 ಕೃಷಿ ಪ್ರಶಸ್ತಿ ಬಹುಮಾನಗಳನ್ನು ಪ್ರತಿ ವರ್ಷ ಸಾಧನೆ ಮಾಡಿದ ರೈತರಿಗೆ/ ರೈತ ಮಹಿಳೆಯರಿಗೆ ಸರ್ಕಾರವು ನೀಡುತ್ತಾ ಬಂದಿದೆ. ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆಯಡಿ ರಾಜ್ಯ ಮಟ್ಟದ ವಿಜೇತರಿಗೆ ಪ್ರಥಮ 0.50 ಲಕ್ಷ, ದ್ವಿತೀಯ- 0.40 ಲಕ್ಷ, ತೃತೀಯ-0.35 ಲಕ್ಷ, ರೂಗಳನ್ನು ಬಹುಮಾನದ ರೂಪದಲ್ಲಿ ಹಾಗೂ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ಫಲಕಗಳನ್ನು ನೀಡಿ ಸನ್ಮಾನಿಸಲಾಗುತ್ತದೆ.
ಕರ್ನಾಟಕ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿ ವಿತರಣೆ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಂತರರಾಷ್ಟ್ರೀಯ ವಾಣಿಜ್ಯ ಮೇಳ ತ್ರಿಪುರವಾಸಿನಿ ಅರಮನೆ ಮೈದಾನ ಬೆಂಗಳೂರಿನಲ್ಲಿ ದಿನಾಂಕ: 06-02-2026 ರಂದು ಪ್ರಧಾನ ಮಾಡಿದರು.
ಈ ಪ್ರಶಸ್ತಿ ವಿತರಣೆಯಲ್ಲಿ ಬೆಳಗಾವಿ ಜಿಲ್ಲೆಗೆ ಕಳೆದ ಆರ್ಥಿಕ ವರ್ಷ 2024-25 ರಲ್ಲಿ ಒಟ್ಟು ಹನ್ನೊಂದು ರೈತರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಮುಸಕಿನ ಜೋಳ ಪುರುಷ ವಿಭಾಗ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ. ಮುಸಕಿನ ಜೋಳ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಎಲ್ಲಾ ಪ್ರಶಸ್ತಿಗಳು, ಚಿಕ್ಕೋಡಿ ತಾಲೂಕಿಗೆ ಲಭಿಸಿವೆ. ಸೋಯಾ, ಅವರೆ ಪುರುಷ ವಿಭಾಗದ ಸ್ವರ್ಧೆಯಲ್ಲಿ ತೃತೀಯ. ಸೋಯಾ ಅವರೆ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಎಲ್ಲಾ ಪ್ರಶಸ್ತಿಗಳು ಬೈಲಹೊಂಗಲ ತಾಲೂಕಿಗೆ ಲಭಿಸಿವೆ.
ಇದೇ ರೀತಿ ಭತ್ತ ಪುರುಷ ವಿಭಾಗದ ಸ್ಪರ್ಧೆಯಲ್ಲಿ ರಾಜ್ಯಕ್ಕೆ ತೃತೀಯ ಈ ರೀತಿ ಒಟ್ಟು ಹನ್ನೊಂದು ಪ್ರಶಸ್ತಿಗಳು ಬೆಳಗಾವಿ ಜಿಲ್ಲೆಗೆ ಲಭಿಸಿವೆ. 2024-25 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಗೆ ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ರಶಸ್ತಿಗಳು (ಒಟ್ಟು-11) ಲಭಿಸಿದಂತಾಗಿದೆ.
ಈ ಹಿಂದಿನ ಆರ್ಥಿಕ ವರ್ಷ 2022-23 ರಲ್ಲಿ ಹಿಂಗಾರು ಜೋಳ (ಮ.ಆ) ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿಯು ರಾಮದುರ್ಗ ತಾಲೂಕಿಗೆ ಲಭಿಸಿದೆ. ಇದೇ ರೀತಿ 2023-24 ರಲ್ಲಿ ಭತ್ತ ಬೆಳೆ ಮಹಿಳೆಯರ ವಿಭಾಗ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿಗಳು ಖಾನಾಪೂರ ತಾಲೂಕಿಗೆ ಲಭಿಸಿವೆ. ಈ ರೀತಿ 2022-23, 2023-24 ಹಾಗೂ 2024-25 ನೇ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 14 ಪ್ರಶಸ್ತಿಗಳು ಲಭಿಸಿವೆ. ಸದರಿ ಕಾರ್ಯಕ್ರಮದಲ್ಲಿ ಈ ಎಲ್ಲ 14 ರೈತ/ರೈತ ಮಹಿಳೆಯರಿಗೆ ಮುಖ್ಯ ಮಂತ್ರಿಗಳು ದಿನಾಂಕ: 06-02-2026 ರಂದು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಾಧನೆಯು ಬೆಳಗಾವಿ ಜಿಲ್ಲೆಯ ರೈತ ಸಮುದಾಯಕ್ಕೆ ಹೆಮ್ಮೆ ತಂದಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಎಚ್.ಡಿ. ಕೋಳೇಕರ ಇವರು ಹರ್ಷ ವ್ಯಕ್ತಪಡಿಸಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.




