
ಪ್ರಗತಿವಾಹಿನಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿದ ಬಸ್ ನದಿಗೆ ಉರುಳಿದ ಪರಿಣಾಮ 18 ಮಂದಿ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಸೋಮವಾರ ಮುಂಜಾನೆ ದಕ್ಷಿಣ ಏಷ್ಯಾದ ನೇಪಾಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹೈವೇ ಮೂಲಕ ಸಾಗುತ್ತಿದ್ದ ಬಸ್ ಧಾಡಿಂಗ್ ಜಿಲ್ಲೆಯ ಭೈನ್ಸಿಗೌಡಾ ಬಳಿಯ ಬೆನಿಘಾಟ್ ರೋರಾಂಗ್ ಗ್ರಾಮೀಣ ಪುರಸಭೆ-5 ಸಮೀಪದ ತ್ರಿಶೂಲಿ ನದಿಗೆ ಉರುಳಿದೆ.
ಚಾಲಕನ ನಿಯಂತ್ರಣ ತಪ್ಪಿ ಬಸ್ ನದಿಗೆ ಉರುಳಿದ್ದು ಈ ದುರ್ಘಟನೆಯಲ್ಲಿ ಸುಮಾರು 18 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಜೊತೆಗೆ 24 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ತಂದು ಚಿಕಿತ್ಸೆ ನೀಡಲಾಗುತ್ತಿದೆ.
ಈಗಾಗಲೇ ಬೆಳಿಗ್ಗೆ 17 ಶವಗಳನ್ನು ಹೊರತೆಗೆಯಲಾಗಿದೆ. ಉಳಿದವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗುತ್ತಿದೆ.




