*ಯುದ್ಧ ನಿಲ್ಲಿಸಲು ಭಾರತ ಮಧ್ಯಪ್ರವೇಶ ಮಾಡಲಿ: ಉಪರಾಷ್ಟ್ರಪತಿಗೆ ಶ್ರೀಶೈಲ ಶ್ರೀ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೊಲ್ಲಿ ದೇಶಗಳಲ್ಲಿ ಉದ್ಭವಿಸಿರುವ ಯುದ್ಧ ಪರಿಸ್ಥಿತಿಯನ್ನು ತಕ್ಷಣ ನಿಲ್ಲಿಸಲು ಭಾರತ ಮಧ್ಯಪ್ರವೇಶ ಮಾಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಉಪ ರಾಷ್ಟ್ರಪತಿ ಅವರ ಬಳಿ ಮನವಿ ಮಾಡಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇರಾಕ್, ಇರಾನ್, ಇಸ್ರೇಲ್ ಸೇರಿದಂತೆ ಕೊಲ್ಲಿ ದೇಶಗಳಲ್ಲಿ ನಡೆಯುತ್ತಿರುವ ಯುದ್ಧವು ವಿಶ್ವ ಶಾಂತಿಗೆ ಧಕ್ಕೆ ತರುತ್ತಿದೆ. ಈ ಯುದ್ಧ ನಡೆಯಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ವಿಶ್ವ ಶಾಂತಿಯ ಸಂದೇಶವನ್ನು ಪ್ರಾಚೀನ ಕಾಲದಿಂದಲೂ ನೀಡುತ್ತಿರುವ ಭಾರತ ದೇಶವು ಈ ಯುದ್ಧವನ್ನು ನಿಲ್ಲಿಸಲು ಮಧ್ಯಪ್ರವೇಶ ಮಾಡಬೇಕು. ಈ ಮೂಲಕ ವಿಶ್ವದಲ್ಲಿ ಭಾರತದ ಗೌರವ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಕುರಿತು ಭಾರತ ಸರ್ಕಾರಕ್ಕೆ ಸಲಹೆ ನೀಡುವಂತೆ ಉಪರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್ ಬಳಿ ಮನವಿ ಮಾಡಿದ್ದು, ಯುದ್ಧ ನಿಲ್ಲಿಸುವ ದಿಕ್ಕಿನಲ್ಲಿ ಭಾರತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದರು.




