
ಪ್ರಗತಿವಾಹಿನಿ ಸುದ್ದಿ: ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದ ನಡುವೆ ಗುಜರಾತ್ಗೆ ಆಗಮಿಸುತ್ತಿದ್ದ ಥಾಯ್ ಸರಕು ಸಾಗಣೆ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ ನಡೆದಿದೆ.
ಭಾರತದ ವಿದೇಶಾಂಗ ವ್ಯವಹಾರದ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಥಾಯ್ನ ಮಯೂರಿ ನರೀ ಹಡಗಿನ ಮೇಲೆ ನಡೆದ ದಾಳಿಯ ವರದಿಗಳನ್ನು ನಾವು ನೋಡಿದ್ದೇವೆ. ಆ ಹಡಗು ಭಾರತದ ಕಾಂಡ್ಲಾಗೆ ಆಗಮಿಸಬೇಕಿತ್ತು.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ವಾಣಿಜ್ಯ ಸಾಗಣೆಯನ್ನು ಮಿಲಿಟರಿ ದಾಳಿ ಗುರಿಯಾಗಿಸಿಕೊಳ್ಳುತ್ತಿದೆ ಎಂದು ಭಾರತ ವಿಷಾದಿಸುತ್ತದೆ. ಈ ಸಂಘರ್ಷದ ಆರಂಭಿಕ ಹಂತದಲ್ಲಿ ಭಾರತೀಯ ನಾಗರಿಕರು ಸೇರಿದಂತೆ ಅಮೂಲ್ಯ ಜೀವಗಳು ಈಗಾಗಲೇ ಇಂತಹ ಅನೇಕ ದಾಳಿಗಳಲ್ಲಿ ಬಲಿಯಾಗಿವೆ ಮತ್ತು ದಾಳಿಯ ತೀವ್ರತೆ ಮತ್ತು ಮಾರಕತೆಯು ಹೆಚ್ಚುತ್ತಿರುವಂತೆ ತೋರುತ್ತಿದೆ.
ನಿನ್ನೆ ಯುನೈಟೆಡ್ ಅರಬ್ ಎಮಿರೇಟ್ಸ್ನ ಬಂದರಿನಿಂದ ಹೊರಟ ಸ್ವಲ್ಪವೇ ಸಮಯದ ನಂತರ ಥಾಯ್ ಧ್ವಜ ಹೊತ್ತಿದ್ದ ಸರಕು ಹಡಗಿನ ಮೇಲೆ ದಾಳಿ ನಡೆದಿದೆ ಎಂದು ರಾಯಲ್ ಥಾಯ್ ನೌಕಾಪಡೆ ತಿಳಿಸಿದೆ. ಘಟನೆಯಲ್ಲಿ ಇಪ್ಪತ್ತು ನಾವಿಕರನ್ನು ರಕ್ಷಿಸಲಾಗಿದೆ, ಆದರೆ ಮೂವರು ಇನ್ನೂ ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.



