*ಆಲಮಟ್ಟಿ ವಿಚಾರವಾಗಿ ರೈತರಿಗೆ ಕೊಟ್ಟ ಮಾತನ್ನು ಸರ್ಕಾರ ಉಳಿಸಿಕೊಳ್ಳಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಕೃಷ್ಣಾ ಮೇಲ್ದಂಡೆ ವಿಚಾರವಾಗಿ ರೈತರಿಗೆ ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ. ನೀರನ್ನು ಒದಗಿಸಿಕೊಡಲು ಬದ್ಧವಾಗಿದ್ದೇವೆ. ಹಣಕಾಸಿನ ವಿಚಾರವಾಗಿ ಸವಾಲುಗಳಿದ್ದು ಇದರ ಬಗ್ಗೆ ನಮ್ಮ ಸರ್ಕಾರ ಏನಾದರೂ ಮಾಡಿಯೇ ಮಾಡುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಆಲಮಟ್ಟಿ ವಿಚಾರವಾಗಿ ಎಚ್.ಕೆ.ಪಾಟೀಲ್ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ನಿರ್ಣಯದ ಪರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಗುರುವಾರ ಮಾತನಾಡಿದರು.
“ಈ ವಿಚಾರವಾಗಿ ದೆಹಲಿಗೆ ತೆರಳಿ ಸಭೆ ನಡೆಸಿ, ಆಂದ್ರ, ಮಹಾರಾಷ್ಟ್ರ ರಾಜ್ಯಗಳು ಅಡ್ಡಿ ಮಾಡುತ್ತಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಕಾನೂನಾತ್ಮಕ ವಿಚಾರಗಳನ್ನು ಚರ್ಚೆ ನಡೆಸಲಾಗಿದೆ. ಬೋಸರಾಜು, ಎಂ.ಬಿ.ಪಾಟೀಲ್, ನಾನು ಎಚ್ ಕೆ.ಪಾಟೀಲ್ ಅವರು ಹಾಗೂ ರಾಜ್ಯದ ಅಡ್ವೋಕೆಟ್ ಜನರಲ್, ನಾಗಮೋಹನ್ ದಾಸ್ ಸೇರಿದಂತೆ ಕಾನೂನು ತಜ್ಞರು ಚರ್ಚೆ ನಡೆಸಿ ರಾಜ್ಯದ ಹಿತ ಕಾಪಾಡಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ” ಎಂದರು.
“ಎಲ್ಲಾ ಸದಸ್ಯರು ಬಜೆಟ್ ಪಾಸ್ ಮಾಡಿಕೊಟ್ಟಿದ್ದೀರಿ. ಪರಿಷತ್ತಿನಲ್ಲಿ ಉತ್ತಮವಾದ ಚರ್ಚೆಗಳು ನಡೆದಿವೆ. ನಮ್ಮ ರಾಜ್ಯದ ಹಿತಕ್ಕಾಗಿ ಆಲಮಟ್ಟಿ ವಿಚಾರದಲ್ಲಿ ಎಚ್.ಕೆ.ಪಾಟೀಲ್ ಅವರು ನಿರ್ಣಯ ಮಂಡಿಸಿದ್ದಾರೆ. ಈ ನಿರ್ಣಯಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಕ್ಕೆ ಅಭಿನಂದನೆ ತಿಳಿಸುತ್ತೇನೆ” ಎಂದರು.

