
ಪ್ರಗತಿವಾಹಿನಿ ಸುದ್ದಿ: ಜ್ವರ ಎಂದು ನಕಲಿ ವೈದ್ಯನ ಬಳಿ ಚಿಕಿತ್ಸೆ ಪಡೆದ 13 ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ.
13 ವರ್ಷದ ಬಾಲಕಿ ಸಿಂಧೂಗೆ ರಾಯಚೂರಿನ ನಕಲಿ ವೈದ್ಯ ಉತ್ತಮ ಕುಮಾರ್ ಸರ್ಕಾರ್ ಚಿಕಿತ್ಸೆ ನೀಡಿದ್ದ. ಅದಾದ ಕೆಲವೇ ಕ್ಷಣಗಳ ಬೆನ್ನಲ್ಲೇ ಬಾಲಕಿ ಸಾವನ್ನಪ್ಪಿದ್ದು, ಸಾವಿಗೆ ವೈದ್ಯನೇ ಕಾರಣ ಎಂದು ಪೋಷಕರು ಆರೋಪಿಸಿದ್ದು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮಿನಗಢ ಗ್ರಾಮದ ಸಿಂಧೂ, ಮಾರ್ಚ್ 26ರಂದು ಜ್ವರದಿಂದ ಬಳಲುತ್ತಿದ್ದಳು. ಉತ್ತಮ ಕುಮಾರ್ ಸರ್ಕಾರ್ ಬಳಿ ತೆರಳಿದ್ದ ಸಿಂಧೂ, ಚಿಕಿತ್ಸೆ ಪಡೆದುಕೊಂಡಿದ್ದಳು. ಚಿಕಿತ್ಸೆ ಬಳಿಕ ಸಿಂಧೂ ಪರೀಕ್ಷೆಗೆ ಹಾಜರಾಗಿದ್ದಳು.
ಇಂಜೆಕ್ಷನ್ ಪಡೆದ ರಾತ್ರಿ ಸಿಂಧೂ ದೇಹದ ಮೇಲೆ ಗುಳ್ಳೆಗಳು ಕಾಣಿಸಿಕೊಂಡಿದ್ದು, ನೋವಿನಿಂದ ನರಳಾಡಿದ್ದಾಳೆ. ಪೋಷಕರು ಕೂಡಲೇ ಮಗಳನ್ನು ಮಾನ್ವಿ ಆಸ್ಪತ್ರೆಗೆ ದಾಖಲಿಸಿದ್ದು, ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಿಂಧೂ ಸಾವನ್ನಪ್ಪಿದ್ದಾಳೆ.
ನಂತರ ಸಿಂಧೂ ಮೃತದೇಹವನ್ನು ಕವಿತಾಳ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಸಿಂಧೂ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ.



