*ವೈದ್ಯನ ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಕದಿದ್ದ ಕೇರ್ ಟೇಕರ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಕೇರ್ ಟೇಕರ್ನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಕೇರ್ ಟೇಕರ್ ಕಾಗವಾಡ ಮೂಲದ ರಾಹುಲ್ ಸತೀಶ್ ಕಾಂಬಳೆ (27) ಹಾಗೂ ಚಿನ್ನ ಮಾರಾಟ ಮಾಡಲು ಸಹಾಯ ಮಾಡಿದ ಕಾಗವಾಡದ ಬಾಬಾಸಾಹೇಬ್ ಕಟಗೇರಿ ಎಂಬಾತನನ್ನು ಬೆಳಗಾವಿಯ ಕ್ಯಾಂಪ್ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಗ ಕ್ಯಾಂಪ್ ಠಾಣಾ ವ್ಯಾಪ್ತಿಯ ನಿವಾಸಿ ಡಾ. ವಿಶ್ವನಾಥ್ ಧಡೇದ ಅವರ ಮನೆಯಲ್ಲಿ ನಡೆದಿದ್ದ ಈ ಭಾರಿ ಕಳ್ಳತನದ ಕುರಿತು ಮೇ 11ರಂದು ಅವರ ಪತ್ನಿ ಅನ್ನಪೂರ್ಣಾ ಧಡೇದ್ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಕ್ರೈಂ ನಿರಂಜನ್ರಾಜೆ ಅರಸ್, ಖಡೇ ಬಝಾರ್ ಎಸಿಪಿ ಶೇಖರಪ್ಪ ಮತ್ತು ಕ್ಯಾಂಪ್ ಪಿಐ ಆನಂದ್ ನೇತೃತ್ವದ ವಿಶೇಷ ಪಡೆ ತನಿಖೆ ಕೈಗೊಂಡು,
ಮನೆಯಲ್ಲಿದ್ದ ಟ್ರೇಜರಿ ಅಥವಾ ಬೀಗವನ್ನು ಯಾವುದೇ ರೀತಿ ಒಡೆಯದೇ ಅತಿ ಚಾಣಾಕ್ಷತನದಿಂದ 930 ಗ್ರಾಂ ಚಿನ್ನಾಭರಣ ಕಳುವು ಮಾಡಿದ್ದ ಆರೋಪಿಯನ್ನು ಕ್ಯಾಂಪ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕಾಗವಾಡದ ಬಾಬಾಸಾಹೇಬ್ ಕಟಗೇರಿ ಎಂಬಾತನ ಮೂಲಕ ಚಿನ್ನ ಮಾರಾಟ ಮಾಡಲು ಯತ್ನಿಸಿದ್ದು, 52.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನ ಹಾಗೂ ಖಾಸಗಿ ಫೈನಾನ್ಸಳಲ್ಲಿ ಅಡಮಾನವಿಟ್ಟು 22.8 ಲಕ್ಷ ರೂ. ಸಾಲ ಪಡೆದಿದ್ದ ಚಿನ್ನ ಸೇರಿದಂತೆ ಒಟ್ಟು 73.3 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಚಿನ್ನದ ವಶಕ್ಕಾಗಿ ತನಿಖೆ ಮುಂದುವರೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ತಿಳಿಸಿದ್ದಾರೆ.




