*ಎಂಎಲ್ಸಿ ಚುನಾವಣೆಯಲ್ಲಿ ನಮಗೆ ಬಿದ್ದಿರುವುದು ಆತ್ಮಸಾಕ್ಷಿಯ ಮತಗಳು: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಎಂಎಲ್ಸಿ ಚುನಾವಣೆಯಲ್ಲಿ ಇಷ್ಟೊಂದು ಮತಗಳು ಬರುತ್ತವೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಕೇವಲ ನಾಲೈದು ಮತಗಳು ಬರಬಹುದು ಅಂದುಕೊಂಡಿದ್ದೆವು. ಆದರೆ ಇಲ್ಲಿ ಬಿದ್ದಿರುವುದು ಆತ್ಮಸಾಕ್ಷಿಯ ಮತಗಳು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ರಾಜಧಾನಿಯ ಅರಮನೆ ಮೈದಾನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿ ಮಾಡೆಲ್ ಈಗ ಕರ್ನಾಟಕದಲ್ಲೂ ಅನುಷ್ಠಾನಗೊಂಡಿದೆ. ನಾವು ಬಿಜೆಪಿಯ ಮಾಡೆಲ್ ಅನ್ನೇ ಅನುಕರಿಸಿದ್ದೇವೆ. ಇದು ಕುದುರೆ ವ್ಯಾಪಾರ ಅಲ್ಲ ಬದಲಿಗೆ ಇದೊಂದು ರಾಜಕೀಯ ತಂತ್ರಗಾರಿಕೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾರಾದರೂ ನಮ್ಮ ಪಕ್ಷಕ್ಕೆ ಬರುವುದಾದರೆ ಅವಕಾಶ ಕಲ್ಪಿಸಬಹುದು. ಸಂದರ್ಭ ಬಂದಾಗ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬಂದರೆ ಯಾವುದೇ ಅಭ್ಯಂತರವಿಲ್ಲ. ಇದು ಕುದುರೆ ವ್ಯಾಪಾರ ಅಲ್ಲ ಬದಲಿಗೆ ಇದೊಂದು ರಾಜಕೀಯ ತಂತ್ರಗಾರಿಕೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ದೆಹಲಿ ಮಾಡೆಲ್ ಈಗ ಕರ್ನಾಟಕದಲ್ಲೂ ಅನುಷ್ಠಾನಗೊಂಡಿದೆ. ನಾವು ಬಿಜೆಪಿಯ ಮಾಡೆಲ್ ಅನ್ನೇ ಅನುಕರಿಸಿದ್ದೇವೆ. ಬಿಜೆಪಿಯಲ್ಲಿ ಮೊದಲಿನಿಂದಲೂ ನಾಯಕತ್ವದ ಗೊಂದಲವಿದೆ ಎಂದು ಅವರು ಲೇವಡಿ ಮಾಡಿದರು.
ಪಕ್ಷಾಂತರ ಮತ್ತು ವಿರೋಧ ಪಕ್ಷಗಳ ಸ್ಥಿತಿಯ ಕುರಿತು ಮಾತನಾಡಿದ ಸಚಿವರು, ತಮ್ಮ ಪಕ್ಷದ ನಾಯಕರು ಕೈಬಿಟ್ಟು ಹೋದಾಗ ಜೆಡಿಎಸ್ ಹಾಗೂ ಬಿಜೆಪಿಗೆ ಬೇಜಾರಾಗುವುದು ಸ್ವಾಭಾವಿಕ. ಇನ್ನು ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾಡುವುದು ಅವರ ಹೈಕಮಾಂಡ್ಲೆ ಬಿಟ್ಟ ವಿಚಾರ. ಇತ್ತೀಚಿನ ಉಪಚುನಾವಣೆಗಳು ಹಾಗೂ ಪ್ರಸ್ತುತ ವಿದ್ಯಮಾನಗಳು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬಿದ್ದು 2028ರ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಧೈರ್ಯ ತಂದಿಕೊಟ್ಟಿವೆ ಎಂದರು.
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆಯ ನಂತರ ಎದ್ದಿರುವ ಅಸಮಾಧಾನದ ಹೊಗೆಯ ಕುರಿತು ಮಾತನಾಡಿದ ಅವರು, ಸಂಪುಟ ವಿಸ್ತರಣೆಯಾದಾಗ ಅಸಮಾಧಾನ ಮೂಡುವುದು ಸಹಜ. ಸದ್ಯ ಇರುವುದು ಕೇವಲ ಇಪ್ಪತ್ತು ಸ್ಥಾನಗಳು, ಆದರೆ ಆಕಾಂಕ್ಷಿಗಳು ಮಾತ್ರ ಅರವತ್ತಕ್ಕೂ ಹೆಚ್ಚು ಜನರಿದ್ದಾರೆ. ಈ ಎಲ್ಲ ಅಸಮಾಧಾನಗಳನ್ನು ಪಕ್ಷದ ಹಿರಿಯರು ಸರಿಪಡಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮುಂದುವರಿದು ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯ ಕುರಿತು ಮಾಹಿತಿ ನೀಡಿದ ಸತೀಶ್ ಜಾರಕಿಹೊಳಿ, ಬಹುನಿರೀಕ್ಷಿತ ಬಿಡದಿ ಟೌನ್ಶಿಪ್ ನಿರ್ಮಾಣದ ಬಗ್ಗೆ ನಾಳಿನ ಕ್ಯಾಬಿನೆಟ್ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಭೆಯಲ್ಲಿ ಪರಾಮರ್ಶೆ ನಡೆಸಲಾಗುವುದು. ಆದರೆ, ಡಿನೋಟಿಫೈ ಮಾಡುವ ಕುರಿತು ಯಾವುದೇ ಚರ್ಚೆಗಳು ನಡೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.



