*ಅಕ್ರಮ ಪಡಿತರ ಅಕ್ಕಿ ಜಪ್ತಿ: ನಿಪ್ಪಾಣಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ನಿಪ್ಪಾಣಿಯ ಸಂದೀಪ್ ಬಾಳಾಸಾಹೇಬ ಘಂಗಾಳಿ ಎಂಬಾತನಿಂದ 1,76,800 ರೂ. ಮೌಲ್ಯದ 5,200 ಕೆಜಿ ತೂಕದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ, ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರ ನಿವಾಸಿಯಾಗಿದ್ದು, ಸದ್ಯ ನಿಪ್ಪಾಣಿಯ ಗಾಂಧಿಚೌಕ್ನಲ್ಲಿ ವಾಸವಿರುವ ಸೋಹೆಲ್ ಆಲಮ್ ಢಾಲಾಯಿತ ಎಂಬಾತ ಹಿದಾಯತ್ ನಗರದ ಶೆಡ್ ಒಂದರಲ್ಲಿ ಸಂಗ್ರಹಿಸಿಟ್ಟಿದ್ದ 85,000 ರೂ. ಮೌಲ್ಯದ 2,500 ಕೆಜಿ ಅಕ್ಕಿಯನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಜಿಲ್ಲಾದ್ಯಂತ ತಾಲೂಕು ಮಟ್ಟದ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಅಕ್ರಮ ದಂಧೆಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
ಬಡವರಿಗಾಗಿ ವಿತರಿಸಲಾಗುವ ಪಡಿತರ ಚೀಟಿದಾರರ (ರೇಷನ್ ಕಾರ್ಡ್ದಾರರ) ಫಲಾನುಭವಿಗಳಿಗೆ ಹಣದ ಆಮಿಷ ಒಡ್ಡಿ, ಅವರಿಂದ ಕಡಿಮೆ ಬೆಲೆಗೆ ಆಹಾರಧಾನ್ಯಗಳನ್ನು ಖರೀದಿ ಮಾಡುವ ದಲ್ಲಾಳಿಗಳು ಮತ್ತು ಕಳ್ಳಸಂತೆಕೋರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಂದ ತಮಗೆ ಸಿಗುವ ಆಹಾರಧಾನ್ಯಗಳನ್ನು ಸ್ವಂತ ಬಳಕೆಗೆ ಉಪಯೋಗಿಸಬೇಕೇ ಹೊರತು ಯಾವುದೇ ಕಾರಣಕ್ಕೂ ಹೊರಗಡೆ ಇತರರಿಗೆ ಮಾರಾಟ ಮಾಡಬಾರದು. ಸರ್ಕಾರದ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ಮಾರಾಟ ಜಾಲದಲ್ಲಿ ತೊಡಗಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.




