*ಗಡಿ ಕನ್ನಡಿಗರ ಸಮಸ್ಯೆ ಸಿಎಂ ಗಮಕ್ಕೆ ತರಲು ಮಹತ್ವದ ಸಭೆ ನಡೆಸಿದ ಕನ್ನಡ ಸಂಘಟನೆಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗುರುವಾರ ಬೆಳಗಾವಿಗೆ ಮೊದಲ ಬಾರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ತರಬೇಕಾದ ಗಡಿ ಭಾಗದ ಕನ್ನಡಿಗರ ಸಮಸ್ಯೆಗಳ ಕುರಿತು ಬುಧವಾರ ಮುಂಜಾನೆ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಸೇರಿದ್ದ ಕನ್ನಡ ಸಂಘಟನೆಗಳು ಸುದೀರ್ಘವಾಗಿ ಚರ್ಚಿಸಿದವು.
ಗಡಿ ವಿವಾದ ಸಂಬಂಧ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ನಡೆದ ಚರ್ಚೆಗಳು, ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರಕ್ಕೆ ಆಗ್ರಹಿಸಿ ಕಳೆದ ನೂರು ದಿನಗಳಿಂದಲೂ ನಡೆದಿರುವ ಕನ್ನಡ ಸಂಘಟನೆಗಳ ಹೋರಾಟ, ಪಾಲಿಕೆಯು ಗೊತ್ತುವಳಿ ಅಂಗೀಕರಿಸುವ ಸಂಬಂಧ ರಾಜ್ಯ ಸರಕಾರ ತನ್ನ ಅಭಿಪ್ರಾಯ ತಿಳಿಸಲು ವಿಳಂಬ ಮಾಡುತ್ತಿರುವ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ, ಬೆಂಗಳೂರಿನಲ್ಲಿರುವ ಗಡಿ ಸಂರಕ್ಷಣಾ ಆಯೋಗದ ಮುಖ್ಯ ಕಚೇರಿಯನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲು ಸಭೆ ನಿರ್ಧರಿಸಿತು.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಮೈನು ಮಕಾನದಾರ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ,ನೃಪತುಂಗ ಯುವಕ ಸಂಘದ ಅಧ್ಯಕ್ಷ ಸಾಗರ್ ಬೋರಗಲ್ಲ, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಶರೀಫ ಸನದಿ, ಕರ್ನಾಟಕ ರಕ್ಷಣಾ ವೇದಿಕೆಯ ಯುವಸೇನೆಯ ಜಿಲ್ಲಾಧ್ಯಕ್ಷ ಬಾಳಪ್ಪ ಗುಡಗೇನಟ್ಟಿ, ಕರುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಲ್ಲಪ್ಪ ಗುಡಗೇನಟ್ಟಿ,ವಕರವೇ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ ಸಿಗಿಹಳ್ಳಿ, ರಾಹುಲ್ ಭೋಸ್ಲೆ, ನಾಗಪ್ಪ ಕೊಪ್ಪದ, ಶಿವಾಜಿ ಗುರುವ,ಎಸ್.ಎಸ್.ಮೂಕನವರ,ಆನಂದ ಬಿಲಾವರ, ಸಂತೋಷ ತಳ್ಳಿಮನಿ, ಭರಮ ಕಾಂಬ್ಳೆ, ದೇವೇಂದ್ರ ತಳವಾರ, ವಿರಕನ್ನಡಿಗ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ಗಂಗಾರಾಮ ಚವ್ಹಾಣ ಮುಂತಾದವರು ಸಭೆಯಲ್ಲಿ ಹಾಜರಿದ್ದು ಸಲಹೆ ಸೂಚನೆ ನೀಡಿದರು.




