*ವಿಶ್ವ ಹೆಪಾಟೈಟಿಸ ದಿನಾಚರಣೆ ಅಂಗವಾಗಿ ಜಾಗೃತ ನಡಿಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವ ಹೆಪಾಟೈಟಿಸ ದಿನಾಚರಣೆ ಅಂಗವಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ, ಗ್ಯಾಸ್ಟ್ರೊಎಂಟ್ರಾಲಾಜಿ ವಿಭಾಗ, ಕಾಹೆರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಹಿರಿಯ ಗ್ಯಾಸ್ಟ್ರೊಎಂಟ್ರಾಲಾಜಿಸ್ಟ ಡಾ. ಸಂತೋಷ ಹಜಾರೆ ಅವರು, ಏರ್ಪಡಿಸಿದ್ದ ಹೆಪಾಟೈಟಿಸ ಬಿ ಹಾಗೂ ಅಂಗಾಂಗ ದಾನಗಳ ಕುರಿತ ಜಾಗೃತಿ ನಡಿಗೆಯನ್ನು ಕಾಹೆರ ಕುಲಪತಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಹಸಿರು ನಿಶಾನೆ ತೋರಿಸುವದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಆರೋಗ್ಯದ ಹಾಗೂ ಅಂಗಾಂಗ ದಾನದ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುತ್ತಿರಬೇಕು. ಅದರಲ್ಲಿಯೂ ಮುಖ್ಯವಾಗಿ ಅಂಗಾಂಗ ದಾನಗಳ ಕುರಿತು ಹೆಚ್ಚಾಗಿ ಅರಿವು ಮೂಡಿಸುವ ಕಾರ್ಯವಾಗಬೇಕು. ಪುಣೆ, ಮುಂಬೈ ಹಾಗೂ ಬೆಂಗಳೂರಿನಂತ ಮಹಾನಗರಗಳಲ್ಲಿ ಸಿಗುವ ಸಕಲ ವೈದ್ಯಕೀಯ ಸೌಲಭ್ಯಗಳನ್ನು ಸ್ಥಳೀಯ ಜನರಿಗೆ ಕೈಗೆಟಕುವ ದರದಲ್ಲಿ ಕಲ್ಪಿಸಲಾಗುತ್ತಿದೆ.
ಮುಖ್ಯವಾಗಿ ಲೀವರ ಕಸಿಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡಲಾಗುತ್ತಿದೆ. ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡುವದೇ ಆಸ್ಪತ್ರೆಯ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ಡಿಸಿಪಿ ನಾರಾಯಣ ಭರಮನಿ ಅವರು ಮಾತನಾಡಿ, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅತ್ಯಂತ ಸುಸಜ್ಜಿತವಾದ ವೈದ್ಯಕೀಯ ಸಲಕರಣೆ ಹಾಗೂ ಗುಣಮಟ್ಟದ ಚಿಕಿತ್ಸೆ ಲಭಿಸುತ್ತಿದೆ. ನಾನೂ ಕೂಡ ಅಲ್ಲಿನ ಸೇವೆ ಪಡೆದಿದ್ದು, ಅತ್ಯುತ್ತಮವಾದ ಚಿಕಿತ್ಸೆ ಹಾಗೂ ಅತ್ಯಂತ ಕಾಳಜಿಪೂರ್ವಕ ಆರೈಕೆ ಮಾಡುತ್ತಾರೆ. ಅತ್ಯಾಧುನಿಕ ಸೇವೆಗಳಿಗೆ ಆದ್ಯತೆ ನೀಡುತ್ತಾರೆ ಎಂದು ಶ್ಲಾಘಿಸಿದರು.
ನಂತರ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಗ್ಯಾಸ್ಟ್ರೊಎಂಟ್ರಾಲಾಜಿ ಡಾ. ಸಂತೋಷ ಹಾಜಾರೆ ಅವರು ಮಾತನಾಡಿ, ಹೆಪಟೈಟಿಸ್ ಬಿ ಮತ್ತು ಸಿ ಯಕೃತ್ತಿನ ರೋಗಗಳು ಮತ್ತು ಸಾವುಗಳಿಗೆ ಪ್ರಮುಖ ಕಾರಣಗಳಾಗಿದ್ದು, ಲಸಿಕಾಕರಣ, ಶೀಘ್ರ ತಪಾಸಣೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಅಪಾಯದಿಂದ ಕಾಪಾಡುವದೇ ಮುಖ್ಯ ಉದ್ದೇಶ. ಕಳೆದ 14 ವರ್ಷಗಳಿಂದ ಹೆಪಾಟೈಟಿಸ ತಪಾಸಣೆ ನೆರವೇರಿಸಲಾಗುತ್ತಿದ್ದು, ಲಕ್ಷಾಂತರ ಜನರನ್ನು ತಪಾಸಣೆಗೊಳ್ಪಡಿಸಿ ಶೇ. 60ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಪುಣೆಯಿಂದ ಬೆಂಗಳೂರು ವರೆಗಿನ ದಾರಿಯಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಮಾತ್ರ ಯಕೃತ್ತಿನ ಸಕಲ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಲೀವರ ಕಸಿ ಮಾಡಲಾಗುತ್ತಿದೆ. ಇಲ್ಲಿಯವೆರೆಗ ಸುಮಾರು 28 ಲೀವರ ಕಸಿ ಮಾಡಲಾಗಿದೆ ಎಂದು ತಿಳಿಸಿದರು.
ಹೆಪಾಟೈಟಿಸ್ ಸೋಂಕಿನ ಕುರಿತು ಜಾಗೃತಿ ನಾಟಕವನ್ನು ಕೆಎಲ್ಇ ನರ್ಸಿಂಗ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ನಾಟಕ ರಚನೆ ಹಾಗೂ ನಿರ್ದೇಶನವನ್ನು ಡಾ. ವಿರೇಶಕುಮಾರ ನಂದಗಾವಿ, ಡಾ. ಹೊನಗೌಡ ಹಾಗೂ ಡಾ. ಗೀತಾ ದೇಸಾಯಿ ಮಾಡಿದರು.
ಚೆನ್ನಮ್ಮ ವೃತ್ತದಿಂದ ಆರಂಭಗೊಂಡ ಜಾಗೃತಿ ನಡಿಗೆಯು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯನ್ನು ತಲುಪಿತು. ಜಾಗೃತಿ ನಡಿಗೆಯಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ, ಕಾಹೆರನ ಉಪಕುಲಪತಿ ಡಾ. ಸಂದೀಪ ಶ್ರೀವಾತ್ಸವ, ಕುಲಸಚಿವ ಡಾ. ವಿ ಎಂ ಪಟ್ಟಣಶೆಟ್ಟಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಶ ಪವಾರ, ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ ಡಾ. ಮಾಧವ ಪ್ರಭು, ಡಾ. ಪಂಚಲಿಂಗಪ್ಪ ಬೆಟಗೇರಿ, ಸರ್ಜಿಕಲ್ ಗ್ಯಾಸ್ಟ್ರೊಎಂಟ್ರಾಲಾಜಿಸ್ಟ ಡಾ. ಸುದರ್ಶನ ಚೌಗಲಾ, ಆಡಳಿತಾಧಿಕಾರಿಗಳಾದ ಡಾ. ಬಸವರಾಜ ಬಿಜ್ಜರಗಿ, ಡಾ. ರಾಜಶೇಖರ ಸೋಮನಟ್ಟಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಎನ್ ಲೋಕೇಶ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು. ಡಾ. ಸೂರಜ ದೇಸಾಯಿ ನಿರೂಪಿಸಿದರು.




