
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕಾವೇರಿ ನೀರು ಬಿಡುಗಡೆ ಕುರಿತು ಬಂದಿರುವ ಆದೇಶ ವಿರೋಧಿಸಿ ಗುರುವಾರ ಕರ್ನಾಟಕ ಬಂದ್ ಕರೆ ನೀಡಿರುವ ಕನ್ನಡ ಚಳವಳಿ ಪಕ್ಷದ ವಾಟಾಳ ನಾಗರಾಜ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂದ್ ಬೆಂಬಲಿಸುವಂತೆ ಕೋರಿ ಬೆಂಗಳೂರಿನಲ್ಲಿ ಸಂಚಾರ ಕೈಗೊಂಡಿದ್ದ ವಾಟಾಳ್ ಹಾಗೂ ಬೆಂಬಲಿಗರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಆದರೆ ಬಂದ್ ನಡೆದೇ ನಡೆಯುತ್ತೆ ಎಂದು ಅವರು ಘೋಷಿಸಿದ್ದಾರೆ. ಬಂದ್ ಕರೆ ನೀಡಿದ್ದೇ ಕನ್ನಡ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ ಶೆಟ್ಟಿ ಅವರೇ ಮೊದಲಿಗೆ ಬಂದ್ ಮಾಡಬೇಕೆಂದು ಹೇಳಿದವರು. ಈಗ ಅವರೇ ಬಂದ್ ಬೆಂಬಲಿಸುವುದಿಲ್ಲ ಎಂದಿರುವುದು ಆಶ್ಚರ್ಯ ತಂದಿದೆ. ಅವರ ನೈತಿಕ ಬೆಂಬಲ ನಮಗೆ ಬೇಕಾಗಿಲ್ಲ ಎಂದು ವಾಟಾಳ ನಾಗರಾಜ ಹೇಳಿದರು.
ಗುರುವಾರದ ಬಂದ್ ಗೆ ಬಹುತೇಕ ಸಂಘಟನೆಗಳು ನೈತಿಕ ಬೆಂಬಲವನ್ನಷ್ಟೇ ನೀಡಿವೆ. ಖಾಸಗಿ ಶಾಲಾ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಅನೇಕ ಸಂಘಟನೆಗಳು ಬಂದ್ ನಲ್ಲಿ ಭಾಗವಹಿಸುವುದಿಲ್ಲ ಎಂದಿವೆ.
ಶಾಲೆಗಳು ಎಂದಿನಂತೆ ನಡೆಯಲಿವೆ. ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಪೋಷಕರ ಸಂಘಟನೆ ಕರೆನೀಡಿದೆ.


