*ಸರ್ಕಾರಿ ಶಾಲಾ ಮಕ್ಕಳಿಗೆ ನೀಡಲಾಗುವ ಶೂ-ಸಾಕ್ಸ್ ಗಳಲ್ಲಿಯೂ ರಾಜ್ಯ ಸರ್ಕಾರದ ಭ್ರಷ್ಟಾಚಾರ*

ವಿತರಿಸಿದ ಒಂದೇ ವಾರದಲ್ಲಿ ಕಿತ್ತುಹೋದ ಶೂಗಳು: ಆರ್.ಅಶೋಕ್ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಶಾಲಾ ಮಕ್ಕಳಿಗೆ ನೀಡಲಾಗುವ ಶೂ-ಸಾಕ್ಸ್ ಗಳಲ್ಲಿಯೂ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಆಕಾಶದಲ್ಲಿ ಹೆಲಿಕಾಪ್ಟರ್ನಲ್ಲಿ ಹಾರಾಡುವ ‘ಹೆಲಿಕಾಪ್ಟರ್ ಸಿಎಂ’ ಡಿ.ಕೆ.ಶಿವಕುಮಾರ್ ಅವರಿಗೆ ಬಡ ಸರ್ಕಾರಿ ಶಾಲಾ ಮಕ್ಕಳ ಹರಿದಿರುವ ಶೂ-ಸಾಕ್ಸ್ ಎಲ್ಲಿ ಕಾಣಬೇಕು? ಎಂದು ವಿಪಕ್ಷ ನಾಯಕ ಆರ್.ಅಸ್ಝೋಕ್ ಪ್ರಶ್ನಿಸಿದ್ದಾರೆ.
ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗಾಗಿ ನೀಡುವ ಉಚಿತ ಶೂ-ಸಾಕ್ಸ್ ಯೋಜನೆಯಲ್ಲೂ ಶೇ. 40 ಕಮಿಷನ್ ಹೊಡೆದು ಕಳಪೆ ಸಾಮಗ್ರಿ ಪೂರೈಸಿರುವುದು ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ನಿರ್ಲಜ್ಜತನಕ್ಕೆ ಮತ್ತೊಂದು ಉದಾಹರಣೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
- ವಿತರಿಸಿದ ಒಂದೇ ವಾರದಲ್ಲಿ ಕಿತ್ತುಹೋದ ಶೂಗಳು: ಧಾರವಾಡ, ರಾಯಚೂರು, ತುಮಕೂರು, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರ್ಕಾರ ವಿತರಿಸಿದ ಶೂಗಳ ಅಡಿಭಾಗ (ಸೋಲ್) ಕಿತ್ತುಹೋಗಿವೆ, ಹೊಲಿಗೆಗಳು ಬಿಟ್ಟುಕೊಂಡಿವೆ!
- ಬಡ ಪೋಷಕರ ಆಕ್ರೋಶ: ಒಂದು ವಾರವೂ ಬಾಳಿಕೆ ಬಾರದ ಇಂತಹ ಕಳಪೆ ಬೂಟುಗಳನ್ನು ವಿತರಿಸಿ ಮಕ್ಕಳ ಭಾವನೆಗಳ ಜೊತೆ ಆಟವಾಡುತ್ತಿದ್ದೀರಾ? ಮತ್ತೆ ಪೋಷಕರೇ ಕೈಯಿಂದ ಹಣ ಹಾಕಿ ಖರೀದಿಸಬೇಕಾದರೆ ಈ ಯೋಜನೆಯ ನೈಜ ಉದ್ದೇಶವೇನು?
- ಕಮಿಷನ್ ಆಸೆಗೆ ಮಕ್ಕಳ ಭವಿಷ್ಯವೇ ಬಲಿ: ಪೂರೈಕೆದಾರರ ಜೊತೆ ಶಾಮೀಲಾಗಿ, ಯಾವುದೇ ಗುಣಮಟ್ಟದ ಪರಿಶೀಲನೆ (Quality Check) ನಡೆಸದೆ ಕಳಪೆ ಶೂಗಳನ್ನು ಶಾಲೆಗಳಿಗೆ ಸರಬರಾಜು ಮಾಡಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಧೈರ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಮುಖ್ಯಮಂತ್ರಿಗಳೇ, ಸರ್ಕಾರಿ ಶಾಲೆಗಳ ಬಡ ಮಕ್ಕಳ ಪಾದರಕ್ಷೆಯಲ್ಲೂ ಕಮಿಷನ್ ಹೊಡೆಯುವ ದರಿದ್ರ ಸ್ಥಿತಿಗೆ ನಿಮ್ಮ ಸರ್ಕಾರ ತಲುಪಿರುವುದು ತೀರಾ ನಾಚಿಕೆಗೇಡು.
ಕೂಡಲೇ ಈ ಕಳಪೆ ಶೂ ಪೂರೈಸಿದ ಗುತ್ತಿಗೆದಾರರನ್ನು ಬ್ಲಾಕ್ಲಿಸ್ಟ್ಗೆ ಸೇರಿಸಿ, ತನಿಖೆ ನಡೆಸಿ, ಬಡ ಮಕ್ಕಳಿಗೆ ತಕ್ಷಣವೇ ಅತ್ಯುತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.




