
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸವದತ್ತಿ ತಾಲೂಕಿನ ಸುರೇಬಾನ ಸಮೀಪದ ಕಿತ್ತೂರ- ನರಗುಂದ ರಸ್ತೆಯ ಬಸವಣಕಟ್ಟೆ ಸೇತುವೆ ಕೆಳಭಾಗದಲ್ಲಿ ನವಜಾತ ಗಂಡು ಶಿಶುವನ್ನು ದಿನಾಂಕ 06.07.2026 ರಂದು ಯಾರೋ ಅಪರಿಚಿತರು ಬಿಟ್ಟು ಹೋಗಿದ್ದು, ಸ್ಥಳೀಯ ಗ್ರಾಮಸ್ಥರು ಗಮನಿಸಿ ಪೋಲಿಸರಿಗೆ ಮಾಹಿತಿಯನ್ನು ನೀಡಿರುತ್ತಾರೆ.
ತಕ್ಷಣ ಪೋಲಿಸರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ಥಳಕ್ಕೆ ಭೇಟಿ ನೀಡಿ, ಮಗುವನ್ನು ರಕ್ಷಣೆ ಮಾಡಿ ಸವದತ್ತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.
ಸದ್ಯ ಮಗುವಿನ ಆರೋಗ್ಯ ಸುಧಾರಣೆಯಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಲಾಗಿತ್ತು. ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಇವರು ತಾತ್ಕಾಲಿಕವಾಗಿ ರಕ್ಷಣೆ ಮತ್ತು ಪೋಷಣೆಗಾಗಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ದತ್ತು ಸ್ವೀಕಾರ ಕೇಂದ್ರ, ಬೆಳಗಾವಿಯಲ್ಲಿ ಅಭೀರಕ್ಷಣೆಗಾಗಿ ಇಡಲಾಗಿದೆ.
ಮಗುವಿನ ಜೈವಿಕ ಪೋಷಕರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪ್ಲಾಟ್ ನಂ. 2688, ಸೆಕ್ಟರ್ ನಂ. 12, ಡಬಲ್ ರೋಡ್, ಶ್ರೀನಗರ, ಬೆಳಗಾವಿ-590016 ದೂರವಾಣಿ ಸಂಖ್ಯೆ:0831-2474111 ಸಂಪರ್ಕಿಸಬಹುದಾಗಿದೆ. ಒಂದು ವೇಳೆ ಜೈವಿಕ ಪೋಷಕರು ಸಂಪರ್ಕ ಮಾಡದೇ ಇದ್ದಲ್ಲಿ ಮಗುವನ್ನು ಕಾನೂನಾತ್ಮಕ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.




