Kannada NewsKarnataka NewsLatest

ರಾಜಕೀಯ ನಾಯಕರು ಬರಿ ಭಾಷಣ ಮಾಡಿ ಹೋಗುವುದಲ್ಲ -ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಕೊರೋನಾ ಇಡೀ ಪ್ರಪಂಚಾದಾದ್ಯಂತ ಮರಣ ಮೃದಂಗ ಭಾರಿಸುತ್ತಿರವ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಬರಿ ಭಾಷಣ ಮಾಡಿ ಹೋಗುವುದಲ್ಲ, ಯಾವುದೇ ಜಾತಿ ಪಕ್ಷ ಅಲ್ಲದೇ ವಿರೋಧ ಪಕ್ಷದ ಮುಖಂಡರು ಸಹ ಸೇರಿ ನಿರ್ಮೂಲನೆ ಮಾಡುವಂತ ಕೆಲಸವಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು ಸೋಮವಾರ ಮೂಡಲಗಿ ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಕೊರೋನಾ ವೈರಸ್ ಬಗ್ಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಗತ್ತಿನಾದ್ಯಂತ ಹರಡಿರುವ ಮಹಾಮಾರಿ ಕೊರೋನಾ ವೈರಸ್ದಿಂದ ನಮ್ಮ ದೇಶದಲ್ಲಿ ಸೋಂಕಿತರ ಮತ್ತು ಸಾವುಗಳ ಸಂಖ್ಯೆ ಹೆಚ್ಚಾಗುತ್ತಾ ದೇಶ ಗಂಡಾತರ ಪರಿಸ್ಥಿತಿಯಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮತ್ತು ವೈದ್ಯರ ಸಲಹೆ ಮತ್ತು ಸೌಲಭ್ಯಗಳನ್ನು ಸೂಕ್ತವಾಗಿ ಬಳಿಸಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ಲಾಕ್‌ಡಾನ್ ಮಾಡುವ ಮೂಲಕ ಕೊರೋನಾದಿಂದ ಮುಕ್ತರಾಗೋಣಾ ಎಂದು ಹೇಳಿದರು.
ಕೊರೋನಾ ಹರಡದಂತೆ ನೋಡಿಕೊಳ್ಳಬೇಕಾದರೆ ಪ್ರತಿಯೊಬ್ಬ ನಾಗರಿಕರು, ಜನಪ್ರತಿನಿಧಿಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಸ್ಥಳಗಲ್ಲಿ ಪ್ರತಿದಿನ ಮನೆಗಳಿಗೆ ಭೇಟಿ ನೀಡಿ ಅನಾರೋಗ್ಯದಿಂದ ಇರುವಂತ ವ್ಯಕ್ತಿಗಳ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದರೆ ಕೊರೋನಾ ಹರಡದಂತೆ ತಡೆಗಟ್ಟಲು ಸಾಧ್ಯವೆಂದು ಹೇಳಿದರು.
ನಿಜಾಮುದ್ದಿನ್ ದಿಂದ ಬಂದಂತ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ತಾವೇ ಬಂದು ಪರಿಶೀಲನೆ ಮಾಡಿಕೊಳ್ಳಬೇಕು ಹೊರೆತು ಮನೆಯಲ್ಲೇ ಬಚ್ಚಿಟ್ಟುಕೊಳ್ಳಬಾರದು, ಹಿಂದೂ ಮುಸ್ಲಿಂ ಭೇದ ಭಾವ ಇಲ್ಲದೇ ಒಗ್ಗಟ್ಟಿನಿಂದ ಕೊರೊನಾ ವಿರುದ್ದ ಹೋರಾಟ ಮಾಡಬೇಕೆಂದರು.
ಮೂಡಲಗಿ ದಂಡಾಧಿಕಾರಿ ಡಿ.ಜೆ.ಮಹಾತ್ ಮಾತನಾಡಿ, ಮೂಡಲಗಿ ತಾಲೂಕಿನಾದ್ಯಂತ ೭ ಜನ ಹೊರದೇಶದಿಂದ ಬಂದಂತ ವ್ಯಕ್ತಿಗಳು, ಬೇರೆ ಬೇರೆ ರಾಜ್ಯದಿಂದ ಬಂದಂತ ೪೪೬ ವ್ಯಕ್ತಿಗಳು, ಬೇರೆ ಜಿಲ್ಲೆಗಳಿಂದ ಬಂದವರು ೭೭೨ ವ್ಯಕ್ತಿಗಳನ್ನು ಗುರುತಿಸಿ ಗೃಹ ಬಂಧನದಲ್ಲಿಡಲಾಗಿದೆ. ಸುದೈವ ಇವರಲ್ಲಿ ಯಾರಿಗೂ ಸೋಂಕು ತಗಲಿರುವುದು ಇದುವರೆಗೂ ದೃಡಪಟ್ಟಿರುವದಿಲ್ಲಾ. ಪೋಲಿಸ್ ಇಲಾಖೆ, ಅಂಗವಾಡಿ, ಆಶಾ ಕಾರ್ಯಕರ್ತೆಯರು, ಪುರಸಭೆ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.
ತಾಲೂಕಾ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್ ಮಾತನಾಡಿ, ಈ ಸಾಂಕ್ರಾಮಿ ರೋಗವು ಮೂರು ತಿಂಗಳಲ್ಲಿ ಜಗತ್ತಿನಾದ್ಯಂತ ಹಬ್ಬಿದೆ, ಈ ರೋಗಕ್ಕೆ ನಿಖರವಾದ ಔಷಧಿ ಇನ್ನೂ ಸಿಕ್ಕಿಲ್ಲ. ವಯಸ್ಸಾದವರೂ ಮತ್ತು ಮಧುಮೇಹಿ ರೋಗಿಗಳು ಕಟ್ಟುನಿಟ್ಟಿನಿಂದ ಚಿಕಿತ್ಸೆ ಪಡೆದಿಕೊಳ್ಳಬೇಕೆಂದರು.
,
ತಾ.ಪಂ.ಕಾರ್ಯನಿರ್ವಾಹಕ ಬಸವರಾಜ ಹೆಗ್ಗನಾಯಕ ಮಾತನಾಡಿ, ಜಿಲ್ಲೆಯಲ್ಲಿ ೭ ಪ್ರಕರಣಗಳು ಪತ್ತೆಯಾಗಿದ್ದು, ಪಕ್ಕದ ತಾಲೂಕಿನಲ್ಲಿ ಸೋಂಕು ದಾಖಲಾಗಿದ್ದು ಎಚ್ಚರಿಕೆಯಿಂದ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕನ್ನು ಹತೋಟಿಗೆ ತರಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಅರಬಾವಿ ಶಾಸಕರು ಮೂಡಲಗಿ ತಾಲೂಕಿಗೆ ೨ಲಕ್ಷ ಮಾಸ್ಕಗಳನ್ನು ಹಂತ ಹಂತವಾಗಿ ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳ ಮೂಲಕ ವಿತರಿಸುವರೆಂದು ಹೇಳಿದರು.
ಜಿ.ಪಂ.ಸದಸ್ಯ ಗೋವಿಂದ ಕೊಪ್ಪದ, ಸಿ.ಪಿ.ಐ.ವೆಂಕಟೇಶ ಮುರನಾಳ, ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿದರು.
ಸಭೆಯಲ್ಲಿ ಮುಖ್ಯಾಧಿಕಾರಿ ಡಿ.ಎಸ್.ಹರ್ದಿ, ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ, ಎಚ್.ವಾಯ್.ಬಾಲದಂಡಿ, ಆರ್.ಕೆ.ಬಿಸಿರೊಟ್ಟಿ, ಡಾ: ಭಾರತಿ ಕೋಣಿ, ಸಿ.ಡಿ.ಪಿ.ಒ. ವಾಯ್.ಎಮ್.ಗುಜನಟ್ಟಿ, ಎನ್.ಎಸ್.ಎಫ್ ಅತಿಥಿ ಗೃಹದ ನಾಗಪ್ಪ ಶೇಖರಗೋಳ, ಸಮುದಾಯ ಆರೋಗ್ಯ ಕೇಂದ್ರದ ಸಲಹಾ ಸಮೀತಿ ಅಧ್ಯಕ್ಷ ಆರ್.ಪಿ.ಸೋನವಾಲ್ಕರ, ಪುರಸಭೆ ಸದಸ್ಯರು, ವಿವಿಧ ಸಂಘ ಸಂಸ್ಥೆಯವರು, ನೂಡಲ್ ಅಧಿಕಾರಿಗಳು ವಿವಿಧ ಗ್ರಾಮಸ್ಥರು ಮತ್ತಿತರರು ಇದ್ದರು.ಪುರಸಭೆ ಆರೋಗ್ಯಾಧಿಕಾರಿ ಚಿದಾನಂದ ಮುಗುಳಖೋಡ ಸ್ವಾಗತಿಸಿ ವಂದಿಸಿದರು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button