
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಆ.15ರೊಳಗೆ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ ಕುಮಾರ ಪ್ರಕಟಿಸಿದ್ದಾರೆ.
ಕೊರೋನಾ ಹಾವಳಿ ಮಧ್ಯೆ ಈ ವರ್ಷ ಶಿಕ್ಷಕರ ವರ್ಗಾವಣೆ ನಡೆಯಲಿಕ್ಕಿಲ್ಲ ಎನ್ನುವ ಊಹೆ ಇತ್ತು. ಆದರೆ ಈಗಾಗಲೆ ಶಿಕ್ಷಕರ ವರ್ಗಾವಣೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿ ನಡೆಸಲಾಗಿದ್ದು, ಇನ್ನು 2 ವಾರದಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಳೆದ 3-4 ವರ್ಷದಿಂದ ವಿವಿಧ ಗೊಂದಲಗಳಿಂದಾಗಿ ಶಿಕ್ಷಕರ ವರ್ಗಾವಣೆ ಸಮರ್ಪಕವಾಗಿ ನಡೆದಿರಲಿಲ್ಲ. ಹಾಗಾಗಿ ಶಿಕ್ಷಕರು ತೀವ್ರ ಅಸಮಾಧಾನಗೊಂಡಿದ್ದರು. ಈ ಬಾರಿ ಯಾವುದೇ ಗೊಂದಲಗಳು ನಡೆಯದೆ ಸರಾಗವಾಗಿ ವರ್ಗಾವಣೆ ಪ್ರಕ್ರಿಯೆ ನಡೆಯಲಿ ಎನ್ನುವುದು ಶಿಕ್ಷಕರ ಆಶಯ.
ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿರುವ ಸುರೇಶ ಕುಮಾರ ಇನ್ನೊಂದು ವಾರದಲ್ಲೇ ನೀತಿ ಜಾರಿಯಾಗಲಿದೆ ಎಂದಿದ್ದಾರೆ.