
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಸಚಿವ, ಜೆಡಿಎಸ್ ನಾಯಕ ಆನಂದ ಅಸ್ನೋಟಿಕರ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ತಮ್ಮ ಬ್ಯಾಗ್ ನಲ್ಲಿ ಗನ್ ಇಟ್ಟುಕೊಂಡು ವಿಮಾನ ನಿಲ್ದಾಣ ಪ್ರವೇಶಿಸಿದ್ದ ಅಸ್ನೋಟಿಕರ್ ಅವರನ್ನು ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದರು. ಗನ್ ಇರುವ ಬಗ್ಗೆ ವಿಮಾನ ನಿಲ್ದಾಣ ಪ್ರವೇಶಗದ ವೇಳೆ ಮಾಹಿತಿ ನೀಡದೆ ಇರುವ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಯಿತು.
ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮ್ಮ ಗನ್ ಅಧಿಕೃತ ಲೈಸೆನ್ಸ್ ಹೊಂದಿದ್ದು, ಅದು ಬ್ಯಾಗ್ ನಲ್ಲಿರುವುದು ತಮಗೂ ಗೊತ್ತಿರಲಿಲ್ಲ. ತುರ್ತು ಕೆಲಸದ ನಿಮಿತ್ತ ಹೊರಟಿದ್ದರಿಂದ ಬ್ಯಾಗ್ ನಲ್ಲಿ ಅದು ಇರುವುದು ಗಮನಕ್ಕೆ ಬಂದಿರಲಿಲ್ಲ ಎಂದು ಅಸ್ನೋಟಿಕರ್ ಹೇಳಿಕೆ ನೀಡಿದ್ದಾರೆ.
ಅಸ್ನೋಟಿಕರ್ ಅವರಿಂದ ಲಿಖಿತ ಪತ್ರ ಪಡೆದ ನಂತರ ಪೊಲೀಸರು ಅವರನ್ನು ಬಿಟ್ಟಿದ್ದು, ವಿಚಾರಣೆಗೆ ಕರೆದಾಗ ಬರುವಂತೆ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.