
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣದ ಹಿಂದೆ ಹಲವು ಅನುಮಾನಗಳು ಮುಡುತ್ತಿದ್ದು, ತಮ್ಮ ಮಗಳ ಸಾವಿನ ಬಗ್ಗೆ ಅನುಮಾನವಿದೆ ತನಿಖೆಗೆ ದೂರು ನೀಡುತ್ತೇವೆ ಎಂದು ಸೌಜನ್ಯ ತಂದೆ ಪ್ರಭು ಮಾದಪ್ಪ ತಿಳಿಸಿದ್ದಾರೆ.
ತಮ್ಮ ಮಗಳು ಸೌಜನ್ಯ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹುಡುಗಿಯಲ್ಲ. ಇಂದು ಬೆಳಿಗ್ಗೆಯಷ್ಟೇ ಆಕೆ ಜೊತೆ ಮಾತನಾಡಿದ್ದೆ. ಇಂದು ಊರಿಗೆ ಬರುತ್ತಿರುವುದಾಗಿ ಹೇಳಿದ್ದಳು. ಸಹೋದರ ಬೈಕ್ ಎಗೆದುಕೊಂಡು ಬರುತ್ತಾರೆ ಎಂದು ಹೇಳಿದ್ದೆ. ನಾನು ಕಾರಲ್ಲಿ ಬರುತ್ತೇನೆ ಎಂದು ಹೇಳಿದ್ದಳು. ಈಗ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಆಕೆ ಫ್ಲ್ಯಾಟ್ ನಲ್ಲಿ ಒಬ್ಬಳೆ ವಾಸವಾಗಿದ್ದಳು ಎಂದು ಸೌಜನ್ಯ ತಂದೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೌಜನ್ಯ ನಾಲ್ಕು ದಿನಗಳ ಹಿಂದಷ್ಟೇ ನನ್ನ ಬಳಿ 1 ಲಕ್ಷ ರೂಪಾಯಿ ಹಣ ಕೂಡ ಪಡೆದುಕೊಂಡಿದ್ದಳು. ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರೆ ಹೇಗೆ…ಆಕೆ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡುತ್ತಿವೆ. ಮಗಳ ಸಾವಿನ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ.
ಕಿರುತೆರೆ ನಟಿ ಸೌಜನ್ಯ ಇಂದು ಬೆಳಿಗ್ಗೆ ಬೆಂಗಳೂರು ಹೊರವಲಯದ ದೊಡ್ಡಬೆಲೆ ಬಳಿಯ ಫ್ಲ್ಯಾಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದ್ದು, ನಾಲ್ಕು ದಿನಗಳ ಹಿಂದೆಯೇ ಡೆತ್ ನೋಟ್ ಬರೆದಿಟ್ಟಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಕಿರುತೆರೆ ನಟಿ ಆತ್ಮಹತ್ಯೆ ಹಿಂದೆ ಹಲವು ಅನುಮಾನಗಳು ಮೂಡುತ್ತಿವೆ.