
ಪ್ರಗತಿವಾಹಿನಿ ಸುದ್ದಿ; ಬಾದಾಮಿ: ಕೆರೂರು ಗುಂಪು ಘರ್ಷಣೆ ಪ್ರಕರಣದಲ್ಲಿ ಗಾಯಗೊಂಡಿದ್ದ ನಾಲ್ವರು ಬಾದಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ವಿಚಾರಿಸಲು ಹೋದ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಪರಿಹಾರದ ಹಣ ಎಸೆದು ಗಾಯಾಳುಗಳ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕೆಲ ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರಿನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಬಾದಾಮಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಗಾಯಾಳು ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದ ವಿಪಕ್ಷ ನಾಯಕ ಸಿದ್ದರಾಮಯ್ಯ, 2 ಲಕ್ಷ ರೂಪಾಯಿ ಪರಿಹಾರ ಹಣ ನೀಡಿದ್ದಾರೆ.
ಈ ವೇಳೆ ಗಾಯಾಳುಗಳ ಕುಟುಂಬದ ಮಹಿಳೆ ರಜ್ಮಾ ಎಂಬುವವರು, ನಮಗೆ ಹಣ ಬೇಡ ಶಾಂತಿ ಬೇಕು. ಗಾಯಾಳುಗಳಲ್ಲಿ ಇಬ್ಬರು 4 ಗಂಟೆ ಕೋಮಾಗೆ ಹೋಗಿದ್ದರು. ಹೆಣ್ಣು ಮಕ್ಕಳಾಗಿ ನಾವು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದೆವೆ. ಪರಿಹಾರದ ಹಣ ಎರಡು ದಿನ ಬರುತ್ತೆ ಮತ್ತೆ ನಾವೇ ದುಡಿದು ತಿನ್ನಬೇಕು. ನಮಗೆ ಹಣ ಬೇಡ ಶಾಂತಿ, ನೆಮ್ಮದಿ ಬೇಕು ಇಂತಹ ಸ್ಥಿತಿ ಯಾರಿಗೂ ಬೇಡ ಎಂದು ಕಣ್ಣೀರಿಟ್ಟಿದ್ದಾರೆ.
ಗಾಯಾಳುಗಳ ಆರೋಗ್ಯ ವಿಚಾರಿಸಿ ವಾಪಸ್ ಆಗುತ್ತಿದ್ದ ಸಿದ್ದರಾಮಯ್ಯ ಅವರಿಗೆ ಪರಿಹಾರದ ಹಣ ವಾಪಸ್ ಕೊಡಲು ಮಹಿಳೆ ರಜ್ಮಾ ಮುಂದಾಗಿದ್ದಾರೆ. ಆದರೆ ಸಿದ್ದರಾಮಯ್ಯ ತಮ್ಮ ಕಾರು ಹತ್ತಿ ಹೋಗಿದ್ದಾರೆ. ಕಾರನ್ನು ಹಿಂಬಾಲಿಸಿ ಓಡುತ್ತಾ ಬಂದ ಮಹಿಳೆ ರಜ್ಮಾ, ನಮಗೆ ಹಣ ಬೇಡ, ಶಾಂತಿ ಬೇಕು ಎಂದು ಹೇಳಿ 2 ಲಕ್ಷ ರೂಪಾಯಿ ಹಣವನ್ನು ಸಿದ್ದರಾಮಯ್ಯ ಅವರ ಕಾರಿನ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಜ್ಮಾ, ಯಾವ ರಾಜಕಾರಣಿಗಳು ಕೊಡುವ ಹಣವೂ ನಮಗೆ ಬೇಡ. ಯಾರೇ ದುಡ್ದು ಕೊಟ್ಟರೂ ಅದು ಕೇವಲ ನಾಲ್ಕು ದಿನ. ಮತ್ತೆ ನಾವೇ ದುಡಿದು ತಿನ್ನಬೇಕು. ಗಾಯಾಳುಗಳು ವರ್ಷಗಟ್ಟಲೇ ಹಾಸಿಗೆ ಮೇಲೆ ಮಲಗುವ ಸ್ಥಿತಿ ಬಂದಿದೆ. ಘಟನೆಯಾಗಿ 8 ದಿನವಾಗಿದೆ ಈಗ ರಾಜಕಾರಣಿಗಳು ಬಂದು ನೋಡುತ್ತಿದ್ದಾರೆ. ಘರ್ಷಣೆ ನಡೆದು ಇಷ್ಟು ದಿನವಾದರೂ ಯಾರೂ ವಿಚಾರಿಸಿಲ್ಲ. ನನ್ನ ತಮ್ಮ, ತಂಗಿಯ ಗಂಡನ ಮೇಲೂ ಹಲ್ಲೆ ನಡೆಸಲಾಗಿದೆ. ಹಿಂದೂ-ಮುಸ್ಲಿಂರು ಶಾಂತಿಯಿಂದ ಬದುಕುವಂತಾಗಬೇಕು. ಹಣಕೊಟ್ಟು ಪರಿಹಾರ ಎನ್ನುವುದು ಬೇಡ. ಕೆರೂರಿನಲ್ಲಿ ಹಿಂದೂ-ಮುಸ್ಲಿಂರ ನಡುವೆ ಬಾಂದವ್ಯದಿಂದ ಬಾಳುವಂತಾಗಬೇಕು. ನಮಗೆ ನ್ಯಾಯಬೇಕು ಎಂದು ಒತ್ತಾಯಿಸಿದ್ದಾರೆ.
ಮಕ್ಕಳ ಎದುರಲ್ಲೇ ಪತ್ನಿಯನ್ನು ಕಡಾಯಿಯಲ್ಲಿ ಬೇಯಿಸಿ ಕೊಂದ ಪತಿ