Latest

ಮೈಸೂರು ದಸರಾ ಬ್ರ್ಯಾಂಡ್ ಸೃಜನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಅದ್ಧೂರಿಯಾಗಿ ದಸರಾ ಆಚರಿಸಲು ಸಿಎಂ ಅಧ್ಯಕ್ಷತೆಯಲ್ಲಿ ನಡೆದ
ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮೈಸೂರು ದಸರಾ ಕುರಿತು ಬ್ರ್ಯಾಂಡ್ ಸೃಜಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ- 2022 ರ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಅವರು ಪತ್ರಿಕಾಗೋಷ್ಠಿ ನಡೆಸಿದರು.

*ಪ್ರಚಾರ*
ಸರ್ಕಾರದ ಎಲ್ಲಾ ಜಾಹೀರಾತು, ಪ್ರಕಟಣೆಗಳು, ವೆಬ್ ಸೈಟ್, ಸಾಮಾಜಿಕ ಮಾಧ್ಯಮಗಳಲ್ಲಿ ಮೈಸೂರು ದಸರಾ ಲಾಂಛನವನ್ನು ಪ್ರಕಟಿಸಬೇಕು. ಮುಂಬೈ, ದೆಹಲಿ ಹಾಗೂ ಚನ್ನೈ ವಿಮಾನನಿಲ್ದಾಣಗಳಲ್ಲಿ ಹಾಗೂ ಇತರೆ ಸಾವಾಜನಿಕ ಸ್ಥಳಗಳಲ್ಲಿ ಮೈಸೂರು ದಸರಾ ಕುರಿತು ಪ್ರಚಾರ ಮಾಡಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.

*ಒಂದು ವಾರದೊಳಗೆ ಮೈಸೂರು ಟೂರಿಸಂ ಸರ್ಕಿಟ್ ಕುರಿತ ಆದೇಶ:* ಒಂದು ವಾರದೊಳಗೆ ಮೈಸೂರು ಟೂರಿಸಂ ಸರ್ಕಿಟ್ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು. ಪ್ರವಾಸೋದ್ಯಮ ಇಲಾಖೆ ಹಾಗೂ ಖಾಸಗಿ ವಲಯದ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲಾಗುವುದು. ಸರ್ಕಿಟ್ ನಲ್ಲಿ ಬೇಲೂರು, ಹಳೇಬೀಡು ಮುಂತಾದ ಪ್ರದೇಶಗಳಿಗೆ ಪ್ರವಾಸದ ಯೋಜನೆ, ಪ್ರಯಾಣ ಹಾಗೂ ವಸತಿ ಎಲ್ಲವೂ ಒಂದೇ ಟಿಕೆಟ್‍ನಲ್ಲಿ ಸಾಧ್ಯವಾಗಲಿದೆ. ಇದಕ್ಕೆ ವೆಬ್‍ಸೈಟ್ ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರು ದಸರಾಕ್ಕೆ ಇದು ಪೂರಕವಾಗಲಿದೆ ಎಂದರು.

*ಪಾರಂಪರಿಕ ಪದ್ದತಿಗಳ ಪುನರಾರಂಭ:* ನಾಡಹಬ್ಬಕ್ಕೆ ಸಂಬಂಧಿಸಿದಂತೆ ಹಿಂದೆ ಅನುಸರಿಸುತ್ತಿದ್ದ ಗಜಪಯಣ ಸೇರಿದಂತೆ ಪಾರಂಪರಿಕ ಪದ್ದತಿಗಳನ್ನು ಪುನ: ಪ್ರಾರಂಭಿಸಲಾಗುವುದು ಎಂದರು. ಇದರಿಂದ ಸ್ಥಳೀಯ ಹಾಗೂ ಗ್ರಾಮೀಣ ಭಾಗದ ಜನರು ತೊಡಗಿಕೊಂಡಂತಾಗುತ್ತದೆ ಎಂದು ತಿಳಿಸಿದರು.

*ವಸ್ತುಪ್ರದರ್ಶನ:* ದಸರಾ ಹಬ್ಬಕ್ಕೆ 15 ದಿನಗಳ ಮುನ್ನವೇ ವಸ್ತು ಪ್ರದರ್ಶನ ಉದ್ಘಾಟಿಸಲು ಸೂಚಿಸಲಾಗಿದೆ ಎಂದರು.

ಶ್ರೀರಂಗಪಟ್ಟಣ ಹಾಗೂ ಚಾಮರಾಜನಗರ ದಸರಾಕ್ಕೆ ತಲಾ 1  ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ.

*ಅನುದಾನ*: ಅರಮನೆ ಆಡಳಿತ ಮಂಡಳಿಯು ಅರಮನೆ ವ್ಯಾಪಿಯೊಳಗಿನ ವೆಚ್ಚವನ್ನು ಭರಿಸಲಿದೆ. ಮೂಡಾ ವತಿಯಿಂದ 10 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ. ಈ ಬಾರಿ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಅನುದಾನ ಬಳಕೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಉಳಿದ ಮೊತ್ತವನ್ನು ಸರ್ಕಾರ ಭರಿಸಲಿದೆ ಎಂದರು.

*ಸ್ಥಳೀಯ ಮತ್ತು ರಾಷ್ಟ್ರಮಟ್ಟದ *ಕಲಾವಿದರಿಗೆ ಪ್ರೋತ್ಸಾಹ:* ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವುದರ ಜೊತೆ ಪ್ರತಿನಿತ್ಯ ಒಬ್ಬ ರಾಷ್ಟ್ರಮಟ್ಟದಲ್ಲಿ ಖ್ಯಾತಿಯಳ್ಳ ಕಲಾವಿದರಿಂದ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

*ಅದ್ಧೂರಿ ದಸರಾ:*
ಎರಡು ವರ್ಷಗಳಿಂದ ಸಾಂಪ್ರದಾಯಿಕ ಸರಳ ದಸರಾ ಆಚರಿಸಲಾಗಿದೆ. ಈ ಬಾರಿ ವಿಜೃಂಭಣೆಯಿಂದ ದಸರಾ ಆಚರಿಸಬೇಕೆಂಬ ಎಲ್ಲರ ಅಭಿಪ್ರಾಯವನ್ನು ಸರ್ಕಾರ ಮನ್ನಿಸಿದೆ.
ಸೆಪ್ಟೆಂಬರ್ 26, 2022 ರಂದು ನವರಾತ್ರಿ ನವರಾತ್ರಿ ದಸರಾ ಪ್ರಾರಂಭ. ಅಕ್ಟೋಬರ್ 5 ವಿಜಯದಶಮಿಯಂದು ನಂದಿಧ್ವಜ ಪೂಜೆ, ಪುಷ್ಪಾರ್ಚನೆ, ಏಳು ಮತ್ತು ಎಂಟರಂದು ವೀರಹೊಸಹಳ್ಳಿಯಿಂದ ಗಜಪಯಣ ಪ್ರಾರಂಭ, ಗಜಪಡೆಯ ನಿರ್ಗಮನದ ಬಗ್ಗೆ ತೀರ್ಮಾನಿಸಲಾಗಿದೆ ಎಂದರು.

ಬೆಳಗಾವಿ – ಸಾಂಬ್ರಾ ರಸ್ತೆ ಅಗಲೀಕರಣ ಯೋಜನೆಗೆ ಶೀಘ್ರ ಮಂಜೂರಾತಿ; KDP ಸಭೆಯಲ್ಲಿ ಶಾಸಕಿಯಿಂದ ತರಾಟೆಗೊಳಗಾದ ಸಚಿವ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button