
ನೋಟಿಸ್ ಬಳಿಕ ಕೇಸ್ ವಾಪಸ್ ಪಡೆಯುತ್ತೇನೆ ಎಂದ ಸುಜಾತಾ ಭಟ್
ಪ್ರಗತಿವಾಹಿನಿ ಸುದ್ದಿ: ಅನನ್ಯಾ ಭಟ್ ನಾಪತ್ತೆ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ಹಸ್ತಾಂತರಿಸಲಾಗಿದ್ದು, ಎಸ್ ಐಟಿ ತಂಡ ತನಿಖೆ ಚುರುಕುಗೊಳಿಸಿದೆ. ಅನನ್ಯಾ ಭಟ್ ತಾಯಿ ಎಂದು ಹೇಳಿಕೊಂಡಿರುವ ಸುಜಾತಾ ಭಟ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಸುಜಾತಾ ಭಟ್ ತಾನು ಕೇಸ್ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳಕ್ಕೆ ಹೋಗಿದ್ದಾಗ ನಾಪತ್ತೆಯಾಗಿದ್ದಾಳೆ. ಆಕೆಯನ್ನು ಹುಡುಕಿಕೊಡಿ ಎಂದು ಸುಜಾತಾ ಭಟ್ ದೂರು ನೀಡಿದ್ದರು. ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ಬೆನ್ನಲ್ಲೇ ಅನನ್ಯಾ ಭಟ್ ನಾಪತ್ತೆ ಪ್ರಕರಣ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ ಸುಜಾತಾ ಭಟ್ ಫೋಟೋ ಒಂದನ್ನು ತೋರಿಸಿ ಈಕೆ ನನ್ನ ಮಗಳು ಅನನ್ಯಾ ಭಟ್. ನಾಪತ್ತೆಯಾಗಿದ್ದಾಳೆ ಎಂದು ಹೇಳಿದ್ದರು. ಈ ಫೋಟೊ ಬಿಡುಗಡೆಯಾಗುತ್ತಿದ್ದಂತೆ ಅದು ಅನನ್ಯಾ ಭಟ್ ಫೋಟವಲ್ಲ ವಾಸಂತಿ ಎಂಬ ಮಹಿಳೆ ಫೋಟೋ ಎಂಬ ಆರೋಪಗಳು ಕೇಳಿಬಂದಿವೆ. ಈ ಎಲ್ಲಾ ಘಟನೆಗಳ ನಡುವೆಯೇ ಅನನ್ಯಾ ಭಟ್ ನಾಪತ್ತೆ ಪ್ರಕರಣವನ್ನು ಎಸ್ ಐಟಿ ತನಿಖೆ ನಡೆಸುತ್ತಿದ್ದು, ಸುಜಾತಾ ಭಟ್ ಅವರಿಗೆ ನೋಟಿಸ್ ನೀಡಿದೆ.
ಅನನ್ಯಾ ಭಟ್ ಬಗ್ಗೆ ಹೆಚ್ಚಿನ ವಿವರ ನೀಡುವಂತೆ ಸೂಚಿಸಿದೆ. ಎಸ್ ಐಟಿಗೆ ಉತ್ತರ ನೀಡದ ಸುಜಾತಾ ಭಟ್, ಒಂದು ಆಡಿಯೋ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಅದರಲ್ಲಿ ತಾನು ಕೇಸ್ ಹಿಂಪಡೆಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಎಸ್ ಐಟಿ ಕೇಸ್ ಹಿಂಪಡೆಯಲು ಸೂಚಿಸಿಲ್ಲ. ತನಿಖೆ ಮುಂದುವರೆಸಿದೆ ಎಂದು ತಿಳಿದುಬಂದಿದೆ. ಒಟ್ಟಾರೆ ತನಿಖೆ ಬಳಿಕವೇ ಅನನ್ಯಾ ಭಟ್ ನಾಪತ್ತೆ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಿದೆ.