National
*ಅಯೋಧ್ಯೆ ರಾಮ ಮಂದಿರದ ಛಾವಣಿ ಸೋರಿಕೆ ಪ್ರಕರಣ; 6 ಅಧಿಕಾರಿಗಳು ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆ ರಾಮ ಮಂದಿರದ ಮೇಲ್ಚಾವಣಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಧಿಕಾರಿಳನ್ನು ಅಮಾನತು ಮಾಡಲಾಗಿದೆ. ಜನವರಿಯಲ್ಲಿ ಉದ್ಘಾಟನೆಗೊಂಡಿದ್ದ ಬಾಲ ರಾಮ ಮಂದಿರಲ್ಲಿ ಛಾವಣಿ ಸೋರಿಕೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ 6 ಅಧಿಕಾರಿಗಳನ್ನು ಅಮಾನತು ಮಾಡಿದೆ. ರಾಜ್ಯದ ಲೋಕೋಪಯೋಗಿ ಇಲಾಖೆ ಹಾಗೂ ಜಲ ನಿಗಮದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಅಯೋಧ್ಯೆ ರಾಮಪಥದ 10 ಕಡೆಗಳಲ್ಲಿ ರಸ್ತೆಗಳು ಕುಸಿದಿವೆ. ಹಲವೆಡೆ ರಸ್ತೆಗಳು ನದಿಯಂತಾಗಿವೆ. ರಾಮ ಮಂದಿರದ ಪವಿತ್ರೀಕರಣ ಸಂದರ್ಭದಲ್ಲಿ ರಾಮಪಥ ನಿರ್ಮಿಸಲಾಗಿತ್ತು. ಜನವರಿ 22ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯಾ ಬಾಲರಾಮ ಮಂದಿರವನ್ನು ಉದ್ಘಾಟಿಸಿದ್ದರು. ಆದರೆ ಮೊದಲ ಮಳೆಯಲ್ಲಿಯೇ ರಾಮ ಮಂದಿರದಲ್ಲಿ ನೀರು ಸೋರುತ್ತಿದೆ ಎಂದು ಪ್ರಧಾನ ಅರ್ಚಕರು ಹೇಳಿದ್ದರು.

