Kannada NewsKarnataka News

ಸಾಂಬ್ರಾದಲ್ಲಿ ಆರೋಗ್ಯ ಜಾತ್ರೆ: ಮನೆ ಬಾಗಿಲಿಗೆ ಆಸ್ಪತ್ರೆ ತಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ನನ್ನ ಕುಟುಂಬ ಬೇರೆ ಅಲ್ಲ, ಗ್ರಾಮೀಣ ಕ್ಷೇತ್ರದ ಜನರು ಬೇರೆ ಅಲ್ಲ ಎಂದ ಶಾಸಕಿ

 

Home add -Advt

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅತ್ಯಪರೂಪದ ಆರೋಗ್ಯ ಜಾತ್ರೆಗೆ ಬೆಳಗಾವಿಯ ಹೊರವಲಯದಲ್ಲಿರುವ ಸಾಂಬ್ರಾ ಗ್ರಾಮ ಶುಕ್ರವಾರ ಸಾಕ್ಷಿಯಾಯಿತು.

ಸಾಬ್ರಾದಲ್ಲಿ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸುವುದಾಗಿ ಕೆಲವೇ ದಿನಗಳ ಹಿಂದೆ ಘೋಷಿಸಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮಗಳೆಂದೇ ಖ್ಯಾತರಾಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಶುಕ್ರವಾರ ಅಕ್ಷರಶಃ ಆಸ್ಪತ್ರೆಯನ್ನೇ ಗ್ರಾಮಕ್ಕೆ ತಂದಿದ್ದರು.

ಲಕ್ಷ್ಮಿ ತಾಯಿ ಫೌಂಡೇಶನ್ ಹಾಗೂ ಕೆಎಲ್ಇಎಸ್ ಡಾ.ಪ್ರಭಾಕರ ಕೋರೆ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾಂಬ್ರಾ ಗ್ರಾಮದಲ್ಲಿ ಇಷ್ಟೊಂದು ದೊಡ್ಡ ಆರೋಗ್ಯ ಶಿಬಿರ ಸಂಘಟಿಸಲಾಗಿತ್ತು.

ನೂರಕ್ಕೂ ಹೆಚ್ಚು ವೈದ್ಯರು, ವೈದ್ಯಕೀಯ ಸಾಮಗ್ರಿ  ಹಾಗೂ ಔಷಧಗಳೊಂದಿಗೆ ಶುಕ್ರವಾರ ಬೆಳಗ್ಗೆ ಸಾಂಬ್ರಾ ಗ್ರಾಮಕ್ಕೆ ಆಗಮಿಸಿದ್ದರು. ಹೃದ್ರೋಗ ತಜ್ಞರಿದ್ದರು, ಮಕ್ಕಳ ತಜ್ಞರಿದ್ದರು, ನರರೋಗ ತಜ್ಞರಿದ್ದರು. ಚರ್ಮರೋಗ ತಜ್ಞರಿದ್ದರು, ದಂತ ವೈದ್ಯರಿದ್ದರು, ಎಲುಬು -ಕೀಲು ತಜ್ಞರಿದ್ದರು, ಕಿಡ್ನಿ ಸ್ಪೆಷಲಿಸ್ಟ್ ಇದ್ದರು, ಲಿವರ್ ಸ್ಪೆಷಲಿಸ್ಟ್ ಇದ್ದರು, ಕಣ್ಣಿನ ತಜ್ಞರಿದ್ದರು, ಕಿವಿ, ಮೂಗು, ಗಂಟಲು ತಜ್ಞರಿದ್ದರು… ಪ್ರತಿಯೊಂದು ರೀತಿಯ ಆರೋಗ್ಯ ಸಮಸ್ಯೆಗೆ ತಪಾಸಣೆ, ಪರಿಹಾರ ಒದಗಿಸುವ ವ್ಯವಸ್ಥೆಯನ್ನು ಅಲ್ಲಿ ಮಾಡಲಾಗಿತ್ತು.

ಬೆಳಗ್ಗೆಯಿಂದ ಸಂಜೆಯವರೆಗೂ ಜನರು ತಂಡೋಪತಂಡವಾಗಿ ಅಲ್ಲಿಗೆ ಬಂದು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಸಾಂಬ್ರಾ ಅಷ್ಟೆ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಜನರು ಅಪಾರ ಸಂಖ್ಯೆಯಲ್ಲಿ ಅಲ್ಲಿಗೆ ಬಂದಿದ್ದರು.

“ಎಲ್ಲರಿಗೂ ಆರೋಗ್ಯ ಸಮಸ್ಯೆಗಳಿರುತ್ತವೆ. ಆದರೆ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲು, ಚಿಕಿತ್ಸೆ ಪಡೆಯಲು ಬೇರೆಬೇರೆ ಕಾರಣದಿಂದಾಗಿ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದರಲ್ಲೂ ಕೊರೋನಾದಂತಹ ಖಾಯಿಲೆಯ ಇಂದಿನ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಹೋಗುವುದೂ ಕಷ್ಟ. ಹಾಗಾಗಿ ಮನೆ ಮಗಳಾಗಿ ಇಲ್ಲಿನ ಜನರ ಆರೋಗ್ಯ ತಪಾಸಣೆ ನನ್ನ ಕರ್ತವ್ಯ ಎಂದುಕೊಂಡು ಈ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದೇನೆ” ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

“ಇಲ್ಲಿ ಬಂದಿರುವ ನನ್ನ ತಂದೆ – ತಾಯಿಗಳು, ಅಣ್ಣ -ತಮ್ಮಂದಿರು, ಅಕ್ಕ -ತಂಗಿಯರು, ಮುದ್ದು ಮಕ್ಕಳು ಎಲ್ಲರಿಗೂ ಆರೋಗ್ಯ ಭಾಗ್ಯ ಕರುಣಿಸಬೇಕೆನ್ನುವ ನನ್ನ ಮಹದಾಸೆಯಂತೆ ಈ ಶಿಬಿರದ ವ್ಯವಸ್ಥೆ ಮಾಡಿದ್ದೇನೆ. ಜನರ ಕಣ್ಣಲ್ಲಿ ಎಂದೂ ನೀರು ಬರಬಾರದು. ಅವರ ಕಷ್ಟಕ್ಕೆ ನಾನು ಸದಾ ನಿಂತಿರುತ್ತೇನೆ. ನನ್ನ ಕುಟುಂಬ ಬೇರೆ ಅಲ್ಲ, ಗ್ರಾಮೀಣ ಕ್ಷೇತ್ರದ ಜನರು ಬೇರೆ ಅಲ್ಲ. ಅವರಿಗೆ ಪ್ರಾಥಮಿಕ ತಪಾಸಣೆ, ಚಿಕಿತ್ಸೆ ಕೊಡಿಸುವ ಕೆಲವಸ ಮಾಡಿದ್ದೇನೆ. ಹೆಚ್ಚಿನ ಚಿಕಿತ್ಸೆ ಅಗತ್ಯವಾದರೂ ನಾನು ಅವರೊಂದಿಗಿರುತ್ತೇನೆ” ಎಂದು ಲಕ್ಷ್ಮಿ ಹೆಬ್ಬಾಳಕರ್ ಭಾವುಕರಾಗಿ ನುಡಿದರು.

ನಾಗೇಶ ದೇಸಾಯಿ, ಶಂಕರಗೌಡ ಪಾಟೀಲ, ಮಹೇಶ ಸುಗಣಣ್ಣವರ್, ಗುರುನಾಥ ಅಷ್ಟೇಕರ್, ಮಹೇಂದ್ರ ಗೋಟೆ, ರಾಜಕುಮಾರ ಚವ್ಹಾಣ, ಗುರುಶಾಂತಯ್ಯ ಹಿರೇಮಠ, ಲಕ್ಷ್ಮಣ ಕೊಳ್ಳಪ್ಪಗೋಳ, ಲಕ್ಷ್ಮಣ ಸುಳೇಬಾವಿ, ಬಸನಗೌಡ ಪಾಟೀಲ, ಉಳ್ಳಪ್ಪ ಮಲ್ಲಣ್ಣವರ್, ಅಡಿವೇಶ ಇಟಗಿ, ಶಾಮ್ ಮುತಗೇಕರ್, ಶಾಂತಾ ದೇಸಾಯಿ, ಶ್ವೇತಾ ಬೊಮ್ಮನವಾಡಿ, ಸದಾಶಿವ ಪಾಟೀಲ, ರಫೀಕ್ ಅತ್ತಾರ್, ಮಹೇಶ ಕುಲಕರ್ಣಿ, ಏಕನಾಥ ಸನದಿ, ವೈದ್ಯರಾದ ಡಾ.ಪೂರ್ಣಿಮಾ ಪಾಟೀಲ, ಡಾ.ಎಸ್.ಎಂ.ದಡೇದ್, ಡಾ.ಎಂ.ಸಿ.ಮೆಟಗುಡ್, ಡಾ.ಪ್ರದೀಪ ಶಿಂಧೆ ಮೊದಲಾದವರು ಇದ್ದರು.

ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ಅವಕಾಶ

Related Articles

Back to top button