Kannada NewsKarnataka NewsLatest

ರಾಜ್ಯಮಟ್ಟಕ್ಕೆ ಮೇಲ್ದರ್ಜೆಗೇರಿದ ಬೆಳಗಾವಿಯ ಸಕ್ಕರೆ ಸಂಸ್ಥೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ೧೪ನೇ ವಾರ್ಷಿಕ ಸರ್ವಸಾಧಾರಣ ಮಹಾಸಭೆ ಸಂಸ್ಥೆಯ ಅಧ್ಯಕ್ಷರೂ, ಸಕ್ಕರೆ ಸಚಿವರೂ ಆಗಿರುವ ಅರಬೈಲ್ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಸಲಾಯಿತು.

 ೨೦೧೧ ರಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಸಂಸ್ಥೆ, ಮಂಡ್ಯ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು ಈ ಸಂಸ್ಥೆಯನ್ನು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯೊಂದಿಗೆ ವಿಲೀನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಪ್ರಕ್ರಿಯೆಯಿಂದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯು ರಾಜ್ಯಮಟ್ಟದ ಸಂಸ್ಥೆಯಾಗಲಿದ್ದು ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗದ ಕಬ್ಬು ಬೆಳೆ ಹಾಗೂ ಸಕ್ಕರೆ ಉದ್ದಿಮೆಗೆ ಸಂಬಂಧಿಸಿದ ಸಂಶೋಧನಾ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಕವಾಗುವುದು.

ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯಿಂದ ರೈತರ ತಾಂತ್ರಿಕ ಮಾರ್ಗದರ್ಶನಕ್ಕಾಗಿ ಕೃಷಿ ವಿಶ್ವವಿದ್ಯಾಲಯ, ಧಾರವಾಡದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಪ್ರಾರಂಭಿಸಲಾಗಿದೆ. ಇದರಿಂದ ಈ ಭಾಗದ ರೈತರಿಗೆ ಕಬ್ಬು ಹಾಗೂ ಇತರ ಕೃಷಿ ಚಟುವಟಿಕೆಗಳ ಮಾಹಿತಿಯನ್ನು ಸಂಸ್ಥೆಯ ಆವರಣದಲ್ಲಿ ಪಡೆಯಲು ಸಾಧ್ಯವಾಗುವುದು.

ಸಭೆಯಲ್ಲಿ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ೯ ಸಕ್ಕರೆ ಕಾರ್ಖಾನೆಗಳಿಗೆ ತಾಂತ್ರಿಕ ಕಾರ್ಯಕ್ಷಮತೆಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಅದರ ವಿವರ ಕೆಳಗಿನಂತಿದೆ.

೨೦೧೯-೨೦ನೇ ಸಾಲಿನ ಪ್ರಶಸ್ತಿಗಳು

ಒಟ್ಟಾರೆ ರಾಜ್ಯದ ಉತ್ತಮ ತಾಂತ್ರಿಕ ಕಾರ್ಯದಕ್ಷತೆ ಪ್ರಶಸ್ತಿ –
ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿ.ನಿಪ್ಪಾಣಿ , ಬೆಳಗಾವಿ ಜಿಲ್ಲೆ

ಉತ್ತಮ ಕಾರ್ಯದಕ್ಷತೆ ಸಹಕಾರಿ ಸಕ್ಕರೆ ಕಾರ್ಖಾನೆ –
ಶ್ರೀ. ಚಿದಾನಂದಬಸಪ್ರಭು ಸಹಕಾರಿ ಸಕ್ಕರೆ ಕಾರ್ಖಾನೆ.ನಿ.ಚಿಕ್ಕೋಡಿ, ಬೆಳಗಾವಿ ಜಿಲ್ಲೆ

ವಾಯವ್ಯ ವಲಯ
ಮೊದಲನೇ ಪ್ರಶಸ್ತಿ – ಇ.ಐ.ಡಿ ಪ್ಯಾರಿ ಶುಗರ‍್ಸ್, ಲಿ., ಖಾನಪೇಟ, ರಾಮದುರ್ಗ, ಬೆಳಗಾವಿ ಜಿಲ್ಲೆ
ದ್ವಿತೀಯ ಪ್ರಶಸ್ತಿ – ಶ್ರೀ. ಬಸವೇಶ್ವರ ಶುಗರ‍್ಸ್ ಲಿ., ಕಾರಜೋಳ, ವಿಜಯಪುರ ಜಿಲ್ಲೆ
ತೃತೀಯ ಪ್ರಶಸ್ತಿ -ಸತೀಶ ಶುಗರ‍್ಸ್ ಲಿ., ಹುಣಶಾಳ, ಗೋಕಾಕ, ಬೆಳಗಾವಿ ಜಿಲ್ಲೆ
ಈಶಾನ್ಯ ವಲಯ
ಮೊದಲನೇ ಪ್ರಶಸ್ತಿ – ಭಾಲ್ಕೇಶ್ವರ ಶುಗರ‍್ಸ್ ಲಿ., ಬೀದರ ಜಿಲ್ಲೆ
ದ್ವಿತೀಯ ಪ್ರಶಸ್ತಿ -ಮಹಾತ್ಮ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಬೀದರ ಜಿಲ್ಲೆ
ದಕ್ಷಿಣ ಮತ್ತು ಮಧ್ಯ ವಲಯ
ಮೊದಲನೇ ಪ್ರಶಸ್ತಿ – ಎನ್.ಎಸ್.ಎಲ್ ಶುಗರ‍್ಸ್ ಲಿ., ಕೊಪ್ಪ, ಮಂಡ್ಯ ಜಿಲ್ಲೆ
ದ್ವಿತೀಯ ಪ್ರಶಸ್ತಿ -ಬನ್ನಾರಿ ಅಮ್ಮನ್ ಶುಗರ‍್ಸ್ ಲಿ., ಕೊಳ್ಳೇಗಾಲ, ಚಾಮರಾಜನಗರ ಜಿಲ್ಲೆ

ಸಂಸ್ಥೆಯಲ್ಲಿ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವಿಸ್ತರಣಾ ಕೇಂದ್ರವನ್ನು ಅರಬೈಲ್ ಶಿವರಾಮ ಹೆಬ್ಬಾರ ಉದ್ಘಾಟಿಸಿದರು. ಸದರಿ ವಿಸ್ತರಣಾ ಕೇಂದ್ರದಿಂದ ಈ ಭಾಗದ ಕಬ್ಬು ಬೆಳೆಗಾರರಿಗೆ, ರೈತರಿಗೆ ಕೃಷಿಗೆ ಸಂಬಂಧಿಸಿದ ವಿಸ್ತರಣಾ ಸೇವೆಯು ಲಭ್ಯವಾಗುತ್ತದೆ ಮತ್ತು ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಸಹಾಯಕವಾಗುತ್ತದೆ.
ಸಂಸ್ಥೆಯಲ್ಲಿ ಸನ್ ೨೦೨೧ -೨೨ ನೇ ಸಾಲಿನಿಂದ  ಸ್ನಾತಕೋತ್ತರ ಪದವಿ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು  ಸ್ನಾತಕೋತ್ತರ ಪದವಿ ಕೋರ್ಸಿನಿಂದ ಸಕ್ಕರೆ ಉದ್ಯಮಕ್ಕೆ ಮದ್ಯಮ ಮತ್ತು ಮೇಲಿನ ಹಂತದಲ್ಲಿ ನುರಿತ ಮಾನವ ಸಂಪನ್ಮೂಲಗಳನ್ನು ಒದಗಿಸುತ್ತದೆ ಹಾಗೂ ಇದಕ್ಕೆ ಸಂಬಂಧಿಸಿದ ಸಂಶೋಧನಾ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ.
ಅಶೋಕ ಪಾಟೀಲ, ಉಪಾಧ್ಯಕ್ಷರು, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ,  ಅಕ್ರಂ ಪಾಷಾ, ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು, ಡಾ|| ರಮೇಶ ಬಾಬು, ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯ ಆಡಳಿತ ಮಂಡಳಿ ಸದಸ್ಯರಾದ  ಮಲ್ಲಿಕಾರ್ಜುನ ಹೆಗ್ಗಳಗಿ,  ಕೃಷ್ಣಕಾಂತ ರೆಡ್ಡಿ, ಅಜೀತ ದೇಸಾಯಿ,  ರಮೇಶ ಪಟ್ಟಣ ಮತ್ತು ಸಂಸ್ಥೆಯ ಇತರ ಸದಸ್ಯರು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button