
ಪ್ರಗತಿವಾಹಿನಿ ಸುದ್ದಿ; ಶಿಗ್ಗಾಂವಿ: ವಿಧಾನಸಭಾ ಚುನಾವಣೆಗೆ ಕೇವಲ 20 ದಿನಗಳು ಮಾತ್ರ ಬಾಕಿಯಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ರೋಡ್ ಶೋ ಮೂಲಕ ಶಕಿ ಪ್ರದರ್ಶನದೊಂದಿಗೆ ಎರಡನೇ ಬಾರಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರ ರೋಡ್ ಶೋ ಆರಂಭವಾಗಿದ್ದು, ರೋಡ್ ಶೋನಲ್ಲಿ ನಟ ಕಿಚ್ಚ ಸುದೀಪ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ದಾ ಭಾಗವಹಿಸಿದ್ದಾರೆ. ಶಿಗ್ಗಾಂವಿಯಲ್ಲಿ ಜನಸಾಗರವೇ ನೆರೆದಿದೆ. ಸಿಎಂ ಬೊಮ್ಮಾಯಿ ಅವರೆಗೆ ಜಯಕಾರ ಕೂಗಿ ಕ್ಷೇತ್ರದ ಜನತೆ ಸಂಭ್ರಮಿಸಿದ್ದಾರೆ.
ರೋಡ್ ಶೋಗೂ ಮುನ್ನ ಶಿಗ್ಗಾಂವಿಯಲ್ಲಿನ ಸಿಎಂ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ ಜೆ.ಪಿ.ನಡ್ಡಾ ಹಾಗೂ ನಟ ಸುದೀಪ್ ಅವರನ್ನು ಸಿಎಂ ಬೊಮ್ಮಾಯಿ ಏಲಕ್ಕಿ ಅಲಕೃತ ಪೇಟ ಹಾಗೂ ಮೈಸೂರು ಪೇಟ, ಶಾಲು ಹೊದಿಸಿ ಸನ್ಮಾನಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಶಿಗ್ಗಾಂವಿಯಲ್ಲಿನ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳಿಕ ನಗರದಲ್ಲಿ ಭರ್ಜರಿ ರೋಡ್ ಶೋ ಆರಂಭವಾಗಿದ್ದು, ಸುಡು ಬಿಸಿಲನ್ನೂ ಲೆಕ್ಕಿಸದೇ ಜನರು ಸಾಗರೋಪಾದಿಯಲ್ಲಿ ರೋಡ್ ಶೋಗೆ ಹರಿದು ಬಂದಿದ್ದಾರೆ.