
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದಿಂದ ಶಾಲಾ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆ ಮತ್ತು ಪೂರಕ ಪೌಷ್ಟಿಕ ಆಹಾರವನ್ನು ಒಂದರಿಂದ 10ನೇ ತರಗತಿ ಮಕ್ಕಳಿಗೆ ಆಹಾರ ತಯಾರಿಸಿ ಶಾಲಾ ಮಕ್ಕಳಿಗೆ ಸರಬರಾಜು ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ಒಕ್ಕೂಟದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಒಕ್ಕೂಟಕ್ಕೆ ಸಹಕಾರವನ್ನು ನೀಡಲು ಮನವಿ ಮಾಡಿಕೊಳ್ಳಲಾಯಿತು.
ಶಿಕ್ಷಣ ಸಚಿವರು ಮನವಿ ಪತ್ರವನ್ನು ಸ್ವೀಕರಿಸಿ ಸ್ವಯಂಸೇವಾ ಸಂಸ್ಥೆಗಳ ಜೊತೆಗೆ ಬಹಳ ಸ್ಪಂದನೆಯಿಂದ ಸಹಕಾರ ನೀಡುವುದರ ಕುರಿತು ಚರ್ಚೆ ಮಾಡಿ ಸ್ವಯಂ ಸೇವಾ ಸಂಸ್ಥೆಗಳ ಜೊತೆ ಒಂದು ಸಭೆಯನ್ನು ಆಯೋಜನೆ ಮಾಡಿ ಎಲ್ಲಾ ಕುಂದು ಕೊರತೆಗಳನ್ನು ಪರಿಹರಿಸಲಾಗುವುದೆಂದು ಭರವಸೆಯನ್ನು ನೀಡಿದರು.
 ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯದರ್ಶಿ ಕೆ ಭೀಮ, ಖಜಾಂಚಿ  ಕಲ್ಲಪ್ಪ ಬೋರಣ್ಣ  ತಮ್ಮ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟಕ್ಕೆ ಸರ್ಕಾರದ ಸಹಕಾರ ಹಾಗೂ ಸ್ಪಂದನೆಯನ್ನು ನೀಡಲು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರುಗಳಾದ ರವೀಂದ್ರ ಕುಮಾರ್,  ಮಂಜುನಾಥ್ ಅಳವಣಿ,  ನಾಗೇಂದ್ರ ಸುಬ್ಬರಾಜು , ಸಲ್ಮಾನ್  ಹಾಗೂ ಪ್ರವೀಣ್ ಉಪಸ್ಥಿತರಿದ್ದರು.
 
 
					 
				 
					 
					 
					 
					
 
					 
					 
					


