*ಹೆಣ್ಣು ಕೊಡಿಸುವಂತೆ ಪ್ರಜಾಸೇವಾ ಆಂದೋಲನದಲ್ಲಿ ಶಾಸಕರಿಗೆ ಅರ್ಜಿ ಸಲ್ಲಿಸಿದ ರೈತ*

ಪ್ರಗತಿವಾಹಿನಿ ಸುದ್ದಿ: ಪ್ರಜಾಸೇವಾ ಆಂದೋಲನದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ವಿಚಾರಣೆ ವೇಳೆ ತನಗೆ ಹೆಣ್ಣು ಕೊಡಿಸುವಂತೆ ಕೋರಿ ಶಾಸಕರಿಗೆ ಅರ್ಜಿ ಸಲ್ಲಿಸಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಆಲದಹಳ್ಳಿಯ ಸಂತೋಷ್ ಎಂಬುವರು 40 ವರ್ಷ ವಯಸ್ಸಾದರೂ ಹೆಣ್ಣು ಸಿಗದ ಕಾರಣ ಮದುವೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಜಾಸೇವಾ ಆಂದೋಲನದಲ್ಲಿ ತನಗೆ ಹೆಣ್ಣು ಕೊಡಿಸುವಂತೆ ಕೋರಿ ಶಾಸಕ ಎ ಮಂಜು ಅವರಿಗೆ ಅರ್ಜಿ ನೀಡಿದ್ದಾರೆ
ಈ ಅರ್ಜಿಯನ್ನು ಪರಿಶೀಲಿಸಿದ ಶಾಸಕ ಎ.ಮಂಜು ರೈತರಿಗೆ ಹೆಣ್ಣು ಸಿಗದಿರುವುದು ನೋವಿನ ಸಂಗತಿ ಎಂದರು. ಈ ವೆಲ್ ವ್ಯಕ್ತಿಗೆ ಧೈರ್ಯ ತುಂಬಿ ಸಂತೈಸಿದರು.
ಎಂಬಿಎ ಪದವೀಧರರಾಗಿರುವ ಸಂತೋಷ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಎರಡು ವರ್ಷಗಳ ಹಿಂದೆ ತಂದೆ, ತಾಯಿ ನಿಧನರಾದ ಕಾರಣ ಗ್ರಾಮಕ್ಕೆ ಮರಳಿದ್ದಾರೆ. ಮದುವೆಯಾಗಲು ಆಸಕ್ತಿ ಇದ್ದರೂ ಸೂಕ್ತ ಸಂಬಂಧ ಸಿಗದಿರುವುದರಿಂದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಈ ಸಮಸ್ಯೆಯನ್ನು ಪ್ರಸ್ತಾಪಿಸಿ, ತಮ್ಮ ವಿವಾಹಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರ ತಿಳಿದು ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹ ಸಂತೋಷ್ ಅವರ ಸಮಸ್ಯೆಯ ಬಗ್ಗೆ ಗಮನ ಹರಿಸಿದರು.
‘ಸ್ವಂತ ಮನೆ, ಜಮೀನು, ಅಂಗಡಿ ಇದ್ದರೂ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ನಗರದಲ್ಲಿ ಮನೆ ಇರಬೇಕು ಎಂಬ ಬೇಡಿಕೆಯೂ ಇದೆ’ ಎಂದು ಸಂತೋಷ್ ಅಳಲು ತೋಡಿಕೊಂಡರು.
ಸರ್ಕಾರದ ಕಲ್ಯಾಣ ಯೋಜನೆಗಳು ಹಾಗೂ ಉದ್ಯೋಗಾವಕಾಶಗಳಿದ್ದರೂ ಗ್ರಾಮೀಣ ಯುವಕರಿಗೆ ವಿವಾಹ ಸಂಬಂಧಗಳು ದೊರೆಯದಿರುವ ಸಮಸ್ಯೆ ಎದುರಾಗುತ್ತಿದೆ. ಕೃಷಿ ಹಾಗೂ ಗ್ರಾಮೀಣ ಜೀವನ ನಡೆಸುವ ಯುವಕರಿಗೆ ಸೂಕ್ತ ವಧು ಸಿಗದಿರುವುದು ಸಾಮಾಜಿಕವಾಗಿ ಚರ್ಚೆಗೆ ಗ್ರಾಸವಾಗಿದೆ.




