
ಪ್ರಗತಿವಾಹಿನಿ ಸುದ್ದಿ: ಎನ್ಸಿಪಿಐನ 20 ಸಂಸದರ ಪೈಕಿ 17 ಸಂಸದರು ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಟಿಎಂಸಿ ಬಂಡಾಯ ನಾಯಕ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ತಿಳಿಸಿದ್ದಾರೆ.
ಅಕ್ಟೋಬರ್ನಲ್ಲಿ ನಡೆಯಲಿರುವ ದುರ್ಗಾ ಪೂಜೆಯ ಮೊದಲು ಅಥವಾ ನಂತರ ಈ ರಾಜಕೀಯ ಬೆಳವಣಿಗೆ ನಡೆಯಲಿದೆ ಎಂದು ಬಸುನಿಯಾ ಮಾಹಿತಿ ನೀಡಿದ್ದಾರೆ.
ಎನ್ಸಿಪಿಐ ಪಕ್ಷದ ಒಟ್ಟು ಬಲದ ಮೂರನೇ ಎರಡರಷ್ಟು ಭಾಗವನ್ನು ತಾನು ಪ್ರತಿನಿಧಿಸುತ್ತಿರುವುದರಿಂದ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಯಾವುದೇ ಅನರ್ಹತೆಗೆ ಗುರಿಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಒಟ್ಟು 17 ಸಂಸದರು ಒಟ್ಟಾಗಿ ಬಿಜೆಪಿಗೆ ಸೇರಲು ನಿರ್ಣಯಿಸಿದ್ದಾರೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಜೂನ್ 14ರಂದು ಟಿಎಂಸಿಯ 20 ಬಂಡಾಯ ಸಂಸದರು ಎನ್ಸಿಪಿಐ ಪಕ್ಷದೊಂದಿಗೆ ವಿಲೀನಗೊಂಡು ಆಡಳಿತಾರೂಢ ಎನ್ಡಿಎ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.
ಪಕ್ಷಾಂತರ ನಿಷೇಧ ಕಾಯ್ದೆಯಡಿ ಕಾನೂನು ರಕ್ಷಣೆ ಪಡೆಯಲು ಮೂರನೇ ಎರಡರಷ್ಟು ಬಹುಮತಕ್ಕೆ ಕನಿಷ್ಠ 14 ಸಂಸದರ ಅಗತ್ಯವಿರುತ್ತದೆ.
ಈ ಪೈಕಿ 17 ಮಂದಿ ಬಿಜೆಪಿಗೆ ಅಧಿಕೃತವಾಗಿ ಸೇರುತ್ತಿದ್ದರೆ, ಇನ್ನುಳಿದ ಸಂಸದರಾದ ಅಬು ತಾಹೇರ್ ಖಾನ್, ಖಲೀಲುರ್ ರೆಹಮಾನ್ ಹಾಗೂ ಯೂಸುಫ್ ಪಠಾಣ್ ಅವರು ತಮ್ಮ ಕ್ಷೇತ್ರಗಳ ರಾಜಕೀಯ ಮತ್ತು ಆಡಳಿತಾತ್ಮಕ ಸನ್ನಿವೇಶಗಳ ಕಾರಣದಿಂದ ಬಿಜೆಪಿಗೆ ಸೇರುವುದಿಲ್ಲ. ಬದಲಿಗೆ, ಅವರು ಹೊರಗಿನಿಂದಲೇ ಎನ್ಡಿಎ ಮೈತ್ರಿಕೂಟಕ್ಕೆ ತಮ್ಮ ಬೆಂಬಲ ಮುಂದುವರಿಸಲಿದ್ದಾರೆ ಎಂದು ಬಸುನಿಯಾ ತಿಳಿಸಿದ್ದಾರೆ.



