EducationKannada NewsKarnataka NewsLatest

*ಆತ್ಮಬಲ ತುಂಬಿದ ಕೆಎಲ್‍ಇ ಸಂಸ್ಥೆಯ ಋಣವನ್ನು ಎಂದಿಗೂ ಮರೆಯಲಾರೆ: ಡಾ.ಸುಧಾ ಮೂರ್ತಿ*

ಗವನಾಳ ಸಂಕೇಶ್ವರದಲ್ಲಿ ಕೆಎಲ್‍ಇ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ: ಕೆಎಲ್‍ಇ ಸಂಸ್ಥೆಯು ನಾಡಿನಲ್ಲಿ ಅಕ್ಷರ ಬೀಜವನ್ನು ಭಿತ್ತಿ ಕೋಟ್ಯಂತರ ವಿದ್ಯಾರ್ಥಿಗಳನ್ನು ರೂಪಿಸಿದೆ. ಸಪ್ತರ್ಷಿಗಳು ಕಂಡ ಕನಸನ್ನು ಸಾಕಾರಗೊಳಿಸಿದೆ. ಜನಮುಖಿಯಾದ ಕಾರ್ಯಗಳನ್ನು ಮಾಡಿ ಮಾದರಿಯಾಗಿದೆ ಎಂದು ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಪದ್ಮಭೂಷಣ ಡಾ.ಸುಧಾ ಮೂರ್ತಿಯವರು ಹೇಳಿದರು.


ಅವರು ಗವನಾಳ-ಸಂಕೇಶ್ವರದಲ್ಲಿ ಕೆಎಲ್‍ಇ ಆಂಗ್ಲ ಮಾಧ್ಯಮ (ಸಿಬಿಎಸ್‍ಸಿ) ಶಾಲೆಯ ನೂತನ ಕಟ್ಟಡ ಉದ್ಘಾಟನೆ, ಮಾಲುತಾಯಿ ಶಿವಪುತ್ರ ಶಿರಕೋಳಿ ನಾಮಕರಣ ಸಮಾರಂಭವನ್ನು ದಿ. 13 ಏಪ್ರಿಲ್ 2024 ರಂದು ನೆರವೇರಿಸಿ ಮಾತನಾಡಿದರು.

‘ಜೀವನದಲ್ಲಿ ಕಷ್ಟಪಟ್ಟು ಓದಿದರೆ ಯಾವುದು ಅಸಾಧ್ಯವಲ್ಲ. ನನಗೆ ವಿದ್ಯಾಭ್ಯಾಸವನ್ನು ನೀಡಿ ಆತ್ಮಬಲ ತುಂಬಿದ ಕೆಎಲ್‍ಇ ಸಂಸ್ಥೆ ಋಣವನ್ನು ನಾನು ಎಂದಿಗೂ ಮರೆಯಲಾರೆ. ವಿದ್ಯಾರ್ಥಿಗಳು ಪರಿಶ್ರಮ ಪಡಬೇಕು. ಕಲಿಯುವ ಕಾಲಕ್ಕೆ ಕಲಿಯಬೇಕು, ಜೀವನವು ಪ್ರತಿದಿನವು ಪರೀಕ್ಷೆಯಿಂದ ಕೂಡಿದೆ. ಕಷ್ಟಪಟ್ಟು ಓದಿದರೆ ಪ್ರತಿಫಲ ತಾನಾಗಿಯೇ ಬರುತ್ತದೆ. ನಮ್ಮ ಮನಸ್ಸಿನ ದೇವರಿಗೆ ವಿರುದ್ಧವಾಗಿ ನಡೆಯಬಾರದು. ಯಶಸ್ಸಿನ ಮೆಟ್ಟಲು ಎಷ್ಟೋ ಸಲ ವಿಫಲವಾಗುತ್ತದೆ. ಅದನ್ನು ಸವಾಲಾಗಿ ಸ್ವೀಕರಿಸಿದಾಗ ಜಯ ನಮ್ಮದೇ. ಪ್ರತಿನಿತ್ಯ ಎಷ್ಟು ಶ್ರಮಿಸುತ್ತೀರಿ ಅಷ್ಟು ನಿಮಗೆ ಪ್ರತಿಫಲ ದೊರೆಯುತ್ತದೆ. ಹಿರಿಯರು, ಶಿಕ್ಷಕರ ಅನುಭವಗಳನ್ನು ಪಡೆಯಬೇಕು. ಹಿರಿಯರ ಮಾತಿಗೊಂದು ತೂಕವಿದೆ. ಅದನ್ನು ಅನುಕರಣೆಗೆ ತರಬೇಕು. ಆಚಾರ್ಯ ದೇವೋಭವ ಎಂಬ ಮಾತಿನಂತೆ ಶಿಕ್ಷಕರ ಮಾರ್ಗದರ್ಶನದೊಂದಿಗೆ ಜೀವನವನ್ನು ರೂಪಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


‘ಸೌಹಾರ್ದಯುತ ಜೀವನವಿರಬೇಕು. ಟೆನಿಸ್ ಆಟಗಾರನಂತೆ ಒಂಟಿಯಾಗಿ ನಿರ್ಧಾರಕೈಗೊಳ್ಳಬೇಕು. ಕ್ರಿಕೆಟ್ ತಂಡದಂತೆ ಸಾಂಘಿಕವಾಗಿ ಕಾರ್ಯನಿರ್ವಹಿಸಿದಾಗ ಜಯ ನಮ್ಮದಾಗುತ್ತದೆ. ಪರರ ಧನಮುಟ್ಟದೆ ಕಾರ್ಯನಿರ್ವಹಿಸುತ್ತಾ ಸಾಗಬೇಕು. ಕಾರ್ಯದಲ್ಲಿ ವಿಫಲತೆ ಯಾದಾಗ ಅದು ಯಶಸ್ಸಿಗೆ ದಾರಿ. ತನು ಮನದಿಂದ ಮಾಡುವ ದಾನವು ಪುಣ್ಯದ ಕೆಲಸ. ಅದು ಲಿಂಗಪೂಜೆಯಂತೆ. ಅದರಲ್ಲಿ ಶಿಕ್ಷಣಕ್ಕಾಗಿ ನೀಡುವ ಭೂದಾನ ಅತ್ಯಂತ ಶ್ರೇಷ್ಠವಾದ್ದು. ಶಿರಕೋಳಿ ಕುಟುಂಬದವರು ಶಿಕ್ಷಣಕ್ಕಾಗಿ ನೀಡಿದ ದಾನ ಅಮರವೆನಿಸಿಕೊಂಡಿದೆ. ಹಳ್ಳಿಯಲ್ಲಿ ಕೆಎಲ್‍ಇ ಸಂಸ್ಥೆಯು ಮಾಡರ್ನ ಶಾಲೆಯನ್ನು ಪ್ರಾರಂಭಿಸುವ ಮೂಲಕ ಮಹತ್ತರವಾದ ಕೊಡುಗೆಯನ್ನ ನೀಡಿದೆ. ಗ್ರಾಮೀಣ ಶಾಲೆಗಳು ಬಹಳ ದುಸ್ಥಿತಿಯಲ್ಲಿದ್ದು ಅವುಗಳ ಕಡೆ ಸರ್ಕಾರ ಗಮನ ಹರಿಸಬೇಕು. ಬೆಂಗಳೂರಿನಂತ ಮಹಾನಗರಗಳಲ್ಲಿ ಶಿಕ್ಷಣ ದುಬಾರಿಯಾಗಿದೆ. ಆದರೆ ಈ ಭಾಗದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕೆಎಲ್‍ಇ ಸಂಸ್ಥೆಯ ಛತ್ರದಲ್ಲಿ ಕೋಟ್ಯಂತರ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದಲ್ಲಿ ತೊಡಗಲಿ’ ಎಂದು ಹಾರೈಸಿದರು.


ಸಭಿಕರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು, ‘ಗ್ರಾಮೀಣ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕಾಗಿಯೇ ಕೆಎಲ್‍ಇ ಸಂಸ್ಥೆಯು ಅಂತರಾಷ್ಟ್ರೀಯ ಗುಣಮಟ್ಟದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿರುವುದು ಹೆಮ್ಮೆ ತಂದಿದೆ. ಈ ಶಾಲೆ ಪ್ರಾರಂಭಗೊಳ್ಳಲು ದಾನವನ್ನು ನೀಡಿದ ಶ್ರೀಮತಿ ಮಾಲುತಾಯಿ ಶಿವಪುತ್ರ ಶಿರಕೋಳಿಯವರನ್ನು ನಾನು ಸಂಸ್ಥೆಯಿಂದ ಅಭಿನಂದಿಸುತ್ತೇನೆ. ಉತ್ತರ ಕರ್ನಾಟಕದ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕೆಂಬ ಉದ್ದೇಶದಿಂದಲೇ ಅಸಂಖ್ಯೆ ದಾನಿಗಳು ಹಾಗೂ ಮಹಾದಾನಿಗಳು ಭೂಮಿ ಹಾಗೂ ಹಣವನ್ನು ನೀಡಿದ್ದನ್ನು ಸಂಸ್ಥೆಯು ಎಂದಿಗೂ ಮರೆಯುವುದಿಲ್ಲ. ಮುಂಬರುವ ಎರಡು ವರ್ಷಗಳಲ್ಲಿ ಅನೇಕ ಕಾರ್ಯಕ್ರಮಗಳ ಮೂಲಕ ಜನಸೇವೆಗೆ ತೊಡಗಿಸಿಕೊಳ್ಳಲಿದೆ. ಕೇವಲ ಆರು ತಿಂಗಳಲ್ಲಿ ಹುಬ್ಬಳ್ಳಿಯ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಮುಂಬಯಿನ ಶಾಲೆ ಜನ ಸೇವೆಗೆ ಅರ್ಪಣೆಯಾಗಲಿದೆ. ಅಲ್ಲದೆ ಇನ್ನೆರಡು ತಿಂಗಳಲ್ಲಿ ಬೆಳಗಾವಿಯಲ್ಲಿ 300 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದೆ. ಸಂಸ್ಥೆಯು ಕನ್ನಡವನ್ನು ಕಟ್ಟಿಬೆಳೆಸುವಲ್ಲಿ ಕಂಕಣಬದ್ಧವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಕಾನ್ವೆಂಟ್ ಶಾಲೆಗಳನ್ನು ತೆರೆಯಲಿದೆ. 4500 ಹಾಸಿಗೆಗಳ ಆಸ್ಪತ್ರೆಯ ಮೂಲಕ ರೋಗಿಗಳ ಸೇವೆಯಲ್ಲಿ ನಿರತವಾಗಿರುವ ಸಂಸ್ಥೆಯು ಅಂಗಾಂಗ ಕಸಿ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಶೀಘ್ರದಲ್ಲಿಯೇ ಲಂಗ್ಸ್(ಶ್ವಾಸಕೋಶ) ಕಸಿ ನೆರವೇರಿಸಲು ಅಣಿಯಾಗಿದ್ದೇವೆ’ ಎಂದು ಹೇಳಿದರು.


ಹುಕ್ಕೇರಿ ಮತಕ್ಷೇತ್ರದ ಶಾಸಕರಾದ ನಿಖಿಲ್ ಕತ್ತಿ ಅವರು ಮಾತನಾಡಿದರು. ನಿಡಸೋಸಿ ದುರದುಂಡೀಶ್ವರ ಸಂಸ್ಥಾನದ ಜಗದ್ಗುರುಗಳಾದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಕೆಎಲ್‍ಇ ಸಂಸ್ಥೆಯು ಅಗಾಧವಾಗಿ ಬೆಳೆದು ನಿಂತಿದೆ. ಗ್ರಾಮೀಣ ಭಾಗದಲ್ಲಿ ಅದ್ಭುತವಾದ ಶಾಲೆಗಳನ್ನು ನಿರ್ಮಿಸಿ ಅಕ್ಷರ ಬೀಜ ಬಿತ್ತುವ ಮಹತ್ತರ ಕೆಲಸಮಾಡಿದೆ ಎಂದ ಅವರು ಯಾವ ತಾಲೂಕಿನಲ್ಲಿ ಶಿಕ್ಷಣ ಹಿಂದುಳಿದಿದೆ ಎಂದು ಗಮನಿಸಿ ಆ ಪ್ರದೇಶದಲ್ಲಿ ಕೆಎಲ್‍ಇ ಸಂಸ್ಥೆಯು ಶಾಲೆಗಳನ್ನು ತೆರೆಯುವುದರ ಮೂಲಕ ನಾಂದಿ ಹಾಡಬೇಕೆಂದು ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ಮಹಾಂತೇಶ ಕೌಜಲಗಿಯವರು ವಹಿಸಿದ್ದರು.
ಇದೇ ಸಂದರ್ಭದಲ್ಲಿ ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾದ ಡಾ.ಸುಧಾ ಮೂರ್ತಿಯವರನ್ನು ಹಾಗೂ ದಾನಿಗಳಾದ ಅಪ್ಪಾಸಾಹೇಬ ಶಿರಕೋಳಿ ಕುಟುಂಬದವರನ್ನು ಕೆಎಲ್‍ಇ ಸಂಸ್ಥೆಯಿಂದ ಸತ್ಕರಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ರಾಹುಲ್ ಜಾರಕಿಹೊಳಿ, ಕೆಎಲ್‍ಇ ಆಡಳಿತ ಮಂಡಳಿಯ ಸದಸ್ಯರಾದ ಶಂಕರಣ್ಣಾ ಮುನವಳ್ಳಿ, ವಾಯ್.ಎಸ್.ಪಾಟೀಲ, ಜಯಾನಂದ ಮುನವಳ್ಳಿ, ಬಾಬಣ್ಣ ಮೆಟಗುಡ್ಡ, ಅನೀಲ ಪಟ್ಟೇದ, ಬಿ.ಆರ್.ಪಾಟೀಲ, ಮಹಾಂತೇಶ ಕವಟಗಿಮಠ, ಅಮಿತ ಕೋರೆ, ಆಶಾ ಕೋರೆ, ಪ್ರವೀಣ ಬಾಗೇವಾಡಿ, ಡಾ.ಎಚ್.ಬಿ.ರಾಜಶೇಖರ, ಎಂ.ಸಿ.ಕೊಳ್ಳಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಐಶ್ವರ್ಯಾ ಗಣಾಚಾರಿ ನಿರೂಪಿಸಿ ವಂದಿಸಿದರು.

Related Articles

Back to top button