
ಪ್ರಗತಿವಾಹಿನಿ ಸುದ್ದಿ; ಹಾಸನ: ಪುರಾತತ್ವ ಇಲಾಖೆ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ವಿಗ್ರಗಳು ಹಾನಿಯಾಗಿರುವ ಘಟನೆ ಹಳೆಬೀಡಿನ ಹೊಯ್ಸಳೇಶ್ವರ ದೇಗುಲದ ಆವರಣದಲ್ಲಿ ನಡೆದಿದೆ.
ಉತ್ಖನನ ಮಾಡಲು ಸ್ಮಾರಕದ ಸುತ್ತ ಬೆಳೆದಿದ್ದ ಗಿಡಗಂಟಿಗಳನ್ನು ಸ್ವಚ್ಚ ಮಾಡಲೆಂದು ಇಲಾಖೆ ಸಿಬ್ಬಂದಿಗಳು ಒಣಗಿದ ಗಿಡಗಳಿಗೆ ಬೆಂಕಿ ಹಚ್ಚಿದ್ದು, ಈ ವೇಳೆ ಅಮೂಲ್ಯ ವಿಗ್ರಹಗಳು ಸುಟ್ಟು ತನ್ನ ಮೂಲ ರೂಪವನ್ನೇ ಕಳೆದುಕೊಂಡು ಹಾನಿಯಾಗಿವೆ.
ಪುರಾತತ್ವ ಇಲಾಖೆಯಿಂದ ನಿಯೋಜನೆಗೊಂಡಿದ್ದ ಕಾರ್ಮಿಕರು ಸ್ವಚ್ಚತೆಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಒಣಗಿದ್ದ ಗಿಡಗಂಟಿಗಳು ಧಗಧಗನೆ ಹೊತ್ತಿ ಉರಿದಿದ್ದು, ಹುಚ್ಚೇಶ್ವರ ಅಥವಾ ಬ್ರಹ್ಮೇಶ್ವರ ಸ್ಮಾರಕದ ಬಹುಭಾಗ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಎಡವಟ್ಟು ಗಮನಕ್ಕೆ ಬರುತ್ತಿದ್ದಂತೆ ಸಿಬ್ಬಂದಿಗಳು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಆದರೆ ಹಲವು ವಿಗ್ರಹ, ಸ್ಮಾರಕಗಳು ಹಾನಿಯಾಗಿವೆ. ಸಿಬ್ಬಂದಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.