Karnataka News

*ಹಾಸನಾಂಬೆ ದರ್ಶನಕ್ಕೆ ಬಿಡಲಾಗಿದ್ದ ವಿಶೇಷ ಬಸ್ ರದ್ದು*

ಪ್ರಗತಿವಾಹಿನಿ ಸುದ್ದಿ: ಹಾಸನಾಂಬೆ ದೇವಿ ದರ್ಶನಕ್ಕೆಂದು ಬಿಡಲಾಗಿದ್ದ 500 ಕೆ.ಎಸ್.ಆರ್.ಟಿ.ಸಿ ವಿಶೇಷ ಬಸ್ ಗಳನ್ನು ರದ್ದುಗೊಳಿಸಲಾಗಿದೆ.

ಹಾಸನದ ಅದಿದೇವತೆ ಹಾಸನಾಂಬೆ ದೇವಿ ದೇವಾಲಯದ ಬಾಗಿಲು ತೆರೆದು ಇಂದು 7ನೇ ದಿನ. ಹಾಸನಾಂಬೆ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬರುತ್ತಿದೆ. ನಿಲ್ಲಲೂ ಜಾಗವಿಲ್ಲದೇ ನೂಕುನುಗ್ಗಲು ಉಂಟಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ನಿರೀಕ್ಷೆಗೂ ಮೀರಿ ಜನರು ಬರುತ್ತಿರುವ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಿ ದರ್ಶನಕ್ಕೆಂದು ಬಿಡಲಾಗಿದ್ದ ವಿಶೇಷ ಬಸ್ ಗಳನ್ನು ರದ್ದು ಮಾಡಲಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಕೆ.ಎಸ್.ಆರ್.ಟಿ.ಸಿ ವಿಶೇಷ ಬಸ್ ಗಳನ್ನು ಬಿಡಲಾಗಿತ್ತು. ಇದೀಗ ಈ ಬಸ್ ವ್ಯವಸ್ಥೆಯನ್ನು ರದ್ದು ಮಾಡಲಾಗಿದೆ.

ಇನ್ನೊಂದೆಡೆ ಜನರನ್ನು ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನಕ್ಕೆ ನೀಡಲಾಗುತ್ತಿದ್ದ ವಿವಿಐಪಿ ಪಾಸ್ ಸೇರಿದಂತೆ ಎಲ್ಲಾ ಪಾಸ್ ಗಳನ್ನು ರದ್ದು ಮಾಡಲಾಗಿದೆ. ಸದ್ಯ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು ಹೊರತುಪಡಿಸಿ ಬೇರೆ ಯಾರಿಗೂ ಪಾಸ್ ವಿತರಣೆ ಇಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button