Belagavi NewsBelgaum NewsKannada NewsKarnataka NewsNationalPolitics

*ಸವದತ್ತಿಗೆ ರೈಲು ಮಾರ್ಗಕ್ಕಾಗಿ ಪ್ರಸ್ತಾವ ಸಲ್ಲಿಸಿದ ಜಗದೀಶ್ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವವಿಖ್ಯಾತ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿ ನಿಡಲು ಅನುಕೂಲವಾಗುವ ನಿಟ್ಟಿನಲ್ಲಿ ಸವದತ್ತಿ ಪಟ್ಟಣಕ್ಕೆ ರೈಲು ಸಂಪರ್ಕ ಕಲ್ಪಿಸಲು ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆಯನ್ನು ಕೈಗೊಳ್ಳುವ ಅವಶ್ಯಕತೆಯ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಅವರು ಪ್ರಸ್ತಾಪಿಸಿದರು.

ಇಂದು ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಬೆಳಗಾವಿ ಲೋಕಸಭಾ ಸಂಸದರಾದ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರೊಂದಿಗೆ ಜೊತೆಗೂಡಿ ಭೇಟಿ ಮಾಡಿ ವಿನಂತಿಸಿ ಮನವಿಯನ್ನು ಅರ್ಪಿಸಿದರು.

ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಪ್ರತಿ ವರ್ಷ ದೇಶದ ವಿವಿಧೆಡೆಗಳಿಂದ ಲಕ್ಷಾಂತರ ಜನ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಾರೆ. ಆದರೆ ಇಲ್ಲಿ ಆಗಮಿಸಲು ಕೇವಲ ರಸ್ತೆ ಸಂಪರ್ಕ ಮಾತ್ರ ಲಭ್ಯವಿರುವುದರಿಂದ ದೇವಸ್ಥಾನದ ರಸ್ತೆ ಉದ್ದಕ್ಕೂ ವಾಹನಗಳ ಸಂಚಾರ ದಟ್ಟಣೆ ಉಂಟಾಗಿ ಹಲವಾರು ಗಂಟೆಗಳ ಕಾಲ ಭಕ್ತರು ಪರದಾಡುವ ಸ್ಥಿತಿ ಎದುರಿಸಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಸವದತ್ತಿ ಪಟ್ಟಣಕ್ಕೆ ರೈಲು ಸಂಪರ್ಕ ಕಲ್ಪಿಸುವುದು ತುಂಬಾ ಅವಶ್ಯಕವಾಗಿದ್ದು, ಈ ಕುರಿತು ನೂತನವಾಗಿ ನಿರ್ಮಾಣ ಮಾಡಬೇಕಾದ ರೈಲು ಮಾರ್ಗದ ಸರ್ವೆ ಕಾರ್ಯ ನಡೆಸಲು ಹುಬ್ಬಳ್ಳಿ ನೈರುತ್ಯ ವಲಯ ರೈಲ್ವೆ ಮಹಾಪ್ರಭಂದಕರಿಗೆ ನಿರ್ದೇಶನ ನೀಡುವ ಬಗ್ಗೆ ಸಂಸದರಾದ ಜಗದೀಶ್ ಶೆಟ್ಟರ್ ಇವರು ಕೇಂದ್ರ ರೇಲ್ವೆ ಸಚಿವರಲ್ಲಿ ವಿನಂತಿಸಿದ್ದಾರೆ.

ಕೇಂದ್ರ ರೈಲ್ವೆ ಸಚಿವರು ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಈ ವಿಷಯವನ್ನು ಶೀಘ್ರ ಪರಿಗಣಿಸುವ ಬಗ್ಗೆ ಭರವಸೆಯನ್ನು ನೀಡಿದ್ದಾರೆ ಎಂದು ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಇದೆ ಸಮಯದಲ್ಲಿ 2016 ರಲ್ಲಿ ಮಹಾದಾಯಿ ಯೋಜನೆಯ ಅನುಷ್ಠಾನಕ್ಕೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲು ರುಕೋ ಕೈಗೊಂಡ ನೂರಾರು ರೈತರ ಮೇಲೆ ಪೋಲಿಸರು ಆಗಿನ ಸಮಯದಲ್ಲಿ ದಾಖಲಿಸಿದ ಕೇಸುಗಳನ್ನು ರದ್ದು ಪಡಿಸುವಂತೆಯೂ ಸಹ ಸಂಸದರು ರೇಲ್ವೆ ಸಚಿವರಲ್ಲಿ ವಿನಂತಿಸಿದರು. ಈ ವಿಷಯದ ಬಗ್ಗೆ ತಾವು ಪರಿಶೀಲಿಸುವ ಒಂದು ಸ್ಪಷ್ಟ ಭರವಸೆಯನ್ನು ರೈಲ್ವೆ ಸಚಿವರು ನೀಡಿರುವ ಬಗ್ಗೆ ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://pragativahini.com/we-suspect-that-one-person-has-died-in-a-fire-accident

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button