
ಪ್ರಗತಿವಾಹಿನಿ ಸುದ್ದಿ : ಇಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಧಾನಸೌಧದಲ್ಲಿ ನಡೆಸಿದ ಮತ್ತೊಂದು ಸುತ್ತಿನ ಸಭೆಯ ಫಲ ನೀಡಿದ್ದು, ಭರವಸೆಗಳನ್ನು ಈಡೇರಿಸುವುದಾಗಿ ಸರ್ಕಾರ ಹೇಳಿದ ಬಳಿಕ ಲಾರಿ ಮಾಲೀಕರ ಸಂಘ ಮುಷ್ಕರವನ್ನು ಹಿಂಪಡೆಯುತ್ತೇವೆ ಎಂದು ಘೋಷಣೆ ಮಾಡಿದೆ..
ಸಂಚಾರ ದಟ್ಟಣೆ ಅವಧಿಯಲ್ಲಿ ನಗರದ ಒಳಗೆ ಲಾರಿಗಳು ಪ್ರವೇಶಿಸುವುದರ ಬಗ್ಗೆ ಇರುವ ನಿರ್ಬಂಧ ತೆರವು ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂಬ ಬೇಡಿಕೆಯನ್ನು ಸಂಘಟನೆಗಳು ಸರ್ಕಾರದ ಮುಂದಿಟ್ಟಿದೆ.
ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡುವಂತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನಡೆಸುತ್ತಿದ್ದ ಲಾರಿ ಮಾಲೀಕರ ಸಂಘದ ಲಾರಿ ಮುಷ್ಕರವನ್ನು ಕೊನೆಗೂ ವಾಪಸ್ ಪಡೆಯಲಾಗಿದೆ.
ಮೊನ್ನೆ ಸಿಎಂ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತ್ಯೇಕವಾಗಿ ನಡೆಸಿದ ಸಂಧಾನ ಸಭೆ ವಿಫಲವಾಗಿತ್ತು. ಮುಷ್ಕರ ಹಿಂಪಡೆಯಲ್ಲ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದರು. ಇದೀಗ ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಮುಷ್ಕರ ಹಿಂಪಡೆಯಲು ಒಪ್ಪಿದ್ದಾರೆ.