Kannada NewsLatestPolitics

*ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಹಾಸನಾಂಬೆ ದರ್ಶನ ಉತ್ಸವದಲ್ಲಿ ಸಾಮಾನ್ಯ ಭಕ್ತರಂತೆ ಸರಳತೆಯನ್ನು ಮೆರೆದಿದ್ದಾರೆ. ಅವರು ಸ್ವತಃ ಸಾವಿರ ರೂಪಾಯಿ ಟಿಕೆಟ್ ಖರೀದಿಸಿ, ಸಾಮಾನ್ಯ ಭಕ್ತರೊಟ್ಟಿಗೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಬೆಂಗಳೂರಿನಿಂದ ಗುರುವಾರ ಸಂಜೆ ಹಾಸನಕ್ಕೆ ಆಗಮಿಸಿದ್ದ ಸಚಿವರಿಗೆ ಜಿಲ್ಲಾಡಳಿತ ನಿಗದಿಪಡಿಸಿದ್ದ ಶಿಷ್ಟಾಚಾರದ ಸಮಯ ಮುಗಿದಿತ್ತು. ಈ ಸಂದರ್ಭದಲ್ಲಿ, “ರೂಲ್ಸ್ ಬ್ರೇಕ್ ಮಾಡುವುದು ಸರಿಯಲ್ಲ” ಎಂದು ನಿರ್ಧರಿಸಿದ ಸಚಿವರು ಯಾವುದೇ ವಿಶೇಷ ಸವಲತ್ತು ಪಡೆಯದೆ ದರ್ಶನ ಪಡೆದರು. ಸಚಿವರ ಈ ನಡೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Home add -Advt

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಹಾಸನ ತಹಸೀಲ್ದಾರ್ ಗೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಧರಣಿ ಕುಮಾರ್, ಮುಖಂಡರಾದ ಪಲ್ಲವಿ ಸೇರಿದಂತೆ ಹಲವರು ಸರತಿ ಸಾಲಿನಲ್ಲಿ ಸಚಿವರಿಗೆ ಸಾಥ್ ನೀಡಿದರು.

  • ಪ್ರಥಮ ಬಾರಿಗೆ ದೇವರ ದರ್ಶನ ಪಡೆದಿದ್ದು ಖುಷಿ ನೀಡಿತು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
  • ಹಾಸನಾಂಬೆ ದರ್ಶನ ಪಡೆದ ಸಚಿವರು ಹಾಸನ: ಪ್ರಥಮ ಬಾರಿಗೆ ತಾಯಿ ದರ್ಶನ ಪಡೆದಿರುವೆ, ನಾಡಿನ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಉತ್ತಮ ಮಳೆ, ಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ‌

ಹಾಸನಾಂಬೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೇವರು ಎಲ್ಲರಿಗೂ ಸೌಭಾಗ್ಯವನ್ನು ಕೊಡಲಿ, ತಾಯಿಯ ದರ್ಶನಕ್ಕಾಗಿ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ಹಾಸನಾಂಬೆ ಮಹತ್ವದ ಬಗ್ಗೆ ಕೇಳಿದ್ದೆ. ದೇವರ ದರ್ಶನ ಪಡೆದಿದ್ದು, ಖುಷಿ ಆಯಿತು ಎಂದು ಸಚಿವರು ಹೇಳಿದರು.

  • ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಹಸನ
    ಶಕ್ತಿ‌ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳಿಂದ ಮಹಿಳೆಯರಿಗೆ ಸ್ವಾವಲಂಬನೆ, ಶಕ್ತಿ ಕೊಟ್ಟಿದೆ.‌ ನಮ್ಮ ಸರ್ಕಾರಕ್ಕೆ ಈ ಯೋಜನೆಗಳಿಂದ ಸಾರ್ಥಕತೆ ಭಾವನೆ ಮೂಡಿದೆ ಎಂದರು.

ಈಗಾಗಲೇ ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗಿದ್ದು, ಆಗಸ್ಟ್ ತಿಂಗಳ ಹಣ ದೀಪಾವಳಿಗೂ ಮುನ್ನ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ನೀಡಿದರು.

ಈ ವೇಳೆ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಹಾಸನ ತಹಸೀಲ್ದಾರ್ ಗೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಧರಣಿ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button