*ಕೊನೆಯ ಕ್ಷಣದವರೆಗೂ ಜನಸೇವೆ ಬಿಡದ ಕಾಕಾ ಸಾಹೇಬ ಪಾಟೀಲ : ಚನ್ನರಾಜ ಹಟ್ಟಿಹೊಳಿ ಸ್ಮರಣೆ*

ಪ್ರಗತಿವಾಹಿನಿ ಸುದ್ದಿ: ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಅವರು ಸಂಘಟನೆ ಮತ್ತು ಜನರ ಸೇವೆಯನ್ನು ಕೊನೆಯವೆರಗೂ ಬಿಡಲಿಲ್ಲ. ಕೊನೆಯವರೆಗೂ ಜನರ ಮಧ್ಯೆ ಇದ್ದು, ತಾವೊಬ್ಬ ಸಂಘಟನಾ ಚತುರ ಎನ್ನುವುದನ್ನು ತೋರಿಸಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ನಿಪ್ಪಾಣಿಯ ಮರಾಠಾ ಮಂಡಳದ ಸಾಂಸ್ಕ್ರತಿಕ ಭವನದಲ್ಲಿ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಒಬ್ಬ ನಿಜವಾದ ಕಾಯಕ ಜೀವಿಯನ್ನು ನಾವು ಕಳೆದುಕೊಂಡಿದ್ದೇವೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಕಾಕಾ ಸಾಹೇಬ ಪಾಟೀಲ ಅವರು ಮೂರು ಬಾರಿ ವಿಧಾನ ಸಭೆ ಸದಸ್ಯರಾಗಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು.
ಅತ್ಯಂತ ಸರಳ ವ್ಯಕ್ತಿಯಾಗಿದ್ದ ಅವರು ಎಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಗುಣವಿತ್ತು. ಏನೇ ಹೇಳಿದರೂ ಮಾಡೋಣ ಎನ್ನುತ್ತಿದ್ದರು. ಅತ್ಯಂತ ಕೆಳ ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತ ಬೆಳೆದ ಅವರು, ಹಲವರನ್ನು ಬೆಳೆಸಿದ್ದರು ಎಂದು ಅವರು ಹೇಳಿದರು.
ನಿಪ್ಪಾಣಿ ಭಾಗದ ನೀರಿನ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ನೀಡಿದವರು ಕಾಕಾ ಪಾಟೀಲ. ಕಾಳಮ್ಮವಾಡಿ ಜಲಾಶಯ ಒಪ್ಪಂದದ ಮೂಲಕ ನಿಪ್ಪಾಣಿಗೆ ನೀರು ಸಿಗುವಂತೆ ಮಾಡಿದರು.
ನಿಪ್ಪಾಣಿ ಮತಕ್ಷೇತ್ರ ಪುನರ್ ವಿಂಗಡಣೆ ವೇಳೆ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಅವರ ಪಾತ್ರ ಮುಖ್ಯವಾಗಿದೆ. ನಿಪ್ಪಾಣಿ ತಾಲೂಕು ಆಗುವುದಕ್ಕೆ ಕೂಡ ಸಾಕಷ್ಟು ಶ್ರಮ ಹಾಕಿದ್ದರು.
ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಗಟ್ಟಿಯಾದ ನೆಲೆ ಒದಗಿಸಿದ್ದರು. ಪಕ್ಷ ಸಂಘಟನೆಯ ವಿಷಯದಲ್ಲಿ ಅತ್ಯಂತ ಕಾಳಜಿ ಹೊಂದಿದ್ದರು. ನಮ್ಮ ಜೊತೆಗೆ ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದ ಅವರು, ಕಳೆದ ಬಾರಿ ಲಕ್ಷ್ಮೀ ಹೆಬ್ಬಾಳಕರ್ ಅವರು ನಿಪ್ಪಾಣಿಗೆ ಆಗಮಿಸಿದ್ದ ವೇಳೆ ಕಚೇರಿಗೆ ಕರೆದೊಯ್ದು ಸನ್ಮಾನ ಮಾಡಿದ್ದರು. ಲಕ್ಷ್ಮೀ ಹೆಬ್ಬಾಳಕರ್ ಅವರು 2 ದಿನ ಮೊದಲು ಆಸ್ಪತ್ರೆಗೆ ಭೇಟಿ ನೀಡಿ ಶೀಘ್ರ ಗುಣಮುಖರಾಗಿ ಜನಸೇವೆಗೆ ಮರಳಲಿ ಎಂದು ಪ್ರಾರ್ಥಿಸಿದ್ದರು. ಆದರೆ ದುರಾದೃಷ್ಟ ಇಷ್ಟು ಬೇಗ ದೇವರು ಅವರನ್ನು ಕರೆಸಿಕೊಂಡಿದ್ದಾರೆ ಎಂದು ಕಂಬನಿ ಮಿಡಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಬುಡಾ ಅಧಕ್ಷರಾದ ಲಕ್ಷ್ಮಣರಾಚ್ ಚಿಂಗಳೆ, ವೀರಕುಮಾರ ಪಾಟೀಲ, ಸುನಿಲ ಹನಮಣ್ಣವರ, ಅಜಿತ್ ಕದಂ, ಪಂಕಜ್ ಪಾಟೀಲ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.