Latest
ಇದ್ದಲಹೊಂಡ ಬಳಿ ಬೆಂಕಿ ಆಕಸ್ಮಿಕ, 10 ಗುಡಿಸಲು ಭಸ್ಮ
ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಇದ್ದಲಹೊಂಡ ಗ್ರಾಮದ ಹೊರವಲಯದ ಗರ್ಲಗುಂಜಿ ರಸ್ತೆ ಪಕ್ಕದ 10 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ.
ಇಟ್ಟಿಗೆ ಭಟ್ಟಿಗಳ ಬಳಿ ಇಟ್ಟಿಗೆ ನಿರ್ಮಾಣ ಕಾರ್ಮಿಕರು ವಾಸಿಸಲು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ 10 ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ತಗುಲಿತು. ಅದರಲ್ಲಿದ್ದ ವಸ್ತುಗಳು ಭಸ್ಮಗೊಂಡಿವೆ. ಇಟ್ಟಿಗೆ ಭಟ್ಟಿಯಲ್ಲಿ ಸಿದ್ಧಗೊಂಡ ಇಟ್ಟಿಗೆಗಳನ್ನು ಸುಡಲು ಭಟ್ಟಿಯ ಮಾಲೀಕರು ಭಟ್ಟಿಗೆ ಬೆಂಕಿ
ಹಾಕಿದ್ದರು. ಮಂಗಳವಾರ ಭಟ್ಟಿಯ ಪಕ್ಕದಲ್ಲಿರುವ ಇಟ್ಟಿಗೆ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿಯ ಕಿಡಿ ಸಿಡಿದು ಬೆಂಕಿ ಹತ್ತಿ ಈ ಅವಘಡ ಸಂಭವಿಸಿದೆ.
ಸ್ಥಳದಲ್ಲಿ ಬೆಂಕಿ ನಂದಿಸುವ ಪರಿಕರಗಳು ಇಲ್ಲದ್ದರಿಂದ ಹೆಚ್ಚಿನ ಹಾನಿ ಸಂಭವಿಸಿದ್ದು, ಯಾವುದೇ ಜೀವಹಾನಿಯಾಗಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸಿದವು.




