
ಪ್ರಗತಿವಾಹಿನಿ ಸುದ್ದಿ: ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಂದ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಮ್ತೆ ಎರಡನೇ ಬಾರಿ ಜೈಲು ಸೇರಿದ್ದ ರಜತ್ ಕಿಶನ್ ಗೆ ಜಾಮೀನು ಮಂಜೂರಾಗಿದೆ.
ಬೆಂಗಳೂರಿನ ೨೪ನೇ ಎಸಿಎಂಎಂ ಕೋರ್ಟ್ ರಜತ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ರಜತ್ ಬಿಡುಗಡೆಯಾಗಲಿದ್ದಾರೆ.
ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿದ್ದ ಪ್ರಕರಣದಲ್ಲಿ ರಜತ್ ಹಾಗೂ ವಿನಯ್ ಗೌಡ ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಈ ವೇಳೆ ಕೋರ್ಟ್, ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸೂಚಿಸಿತ್ತು. ಆದತೆ ಕೋರ್ಟ್ ಆದೇಶ ಪಾಲಿಸದೇ ರಜತ್ ನ್ಯಾಯಾಲಯದ ಕೆಂಗಣ್ಣಿಗೆ ಗುತ್ರಿಯಾಗಿದ್ದರು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ರಜತ್ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿತ್ತು. ವಾರೆಂಟ್ ಜಾರಿಯಗೌತ್ತಿದ್ದಂತೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಪೊಲೀಸರು ರಜತನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದ ವೇಳೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಏ.16ರಂದು ರಜತ್ ಮತ್ತೆ ಜೈಲುಪಾಲಾಗಿದ್ದರು.
ರಜತ್ ಗೆ ನ್ಯಾಯಾಂಗ ಬಂಧನ ಆದೇಶ ಹೊರಬೀಳಿತ್ತಿದಂತೆಯೇ ವಿನಯ್ ಗೌಡ ತಕ್ಷಣ ಕೋರ್ಟ್ ಗೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಕೋರ್ಟ್ 500 ರೂಪಾಯಿ ದಂಡ ಪಾವತಿಸಲು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ದಂಡ ಪಾವತಿ ಮೂಲಕ ವಿನಯ್ ಜೈಲುಪಾಲಾಗುವುದರಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದರು.