Belagavi NewsBelgaum News

*2 ಟಿಎಂಸಿ ನೀರು ಹರಿಸಲು ಮಾರ್ಚ್ ನಲ್ಲೇ ಮನವಿ ಸಲ್ಲಿಸಿದರೂ ಮಹಾರಾಷ್ಟ್ರ ಸರ್ಕಾರ ನೀರು ಬಿಟ್ಟಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಕೊಯ್ನಾ ಡ್ಯಾಮ್‌ ನಿಂದ ಕೃಷ್ಣಾ ನದಿಗೆ 2 ಟಿಎಂಸಿ ನೀರು ಹರಿಸುವಂತೆ ಮಾರ್ಚ್ ತಿಂಗಳಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಸಿಂಧೆಯವರಿಗೆ ಒತ್ತಾಯಿಸಲಾಗಿತ್ತು. ಆದರೆ ಇದುವರೆಗೆ ನೀರು ಬಿಟ್ಟಿಲ್ಲ. ರಾಜಾಪುರ ಬ್ಯಾರೇಜ್ ನಿಂದ ಹೆಚ್ಚಾದ ನೀರು ಸ್ವಲ್ಪ ಮಟ್ಟಿಗೆ ಕೃಷ್ಠಾ ನದಿಗೆ ಬಂದಿದ್ದು, 10 ದಿನಗಳ ಕಾಲ ಜನತೆಗೆ ಅನುಕೂಲವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಯ್ನಾ ಡ್ಯಾಮ್‌ ನಿಂದ ಕೃಷ್ಣಾ ನದಿಗೆ ನೀರು ಹರಿಸುವುದು, ಆಲಮಟ್ಟಿ ಜಲಾಶಯದಿಂದ ಮಹಾರಾಷ್ಟ್ರ ರಾಜ್ಯ ಗಡಿ ಪ್ರದೇಶಗಳಿಗೆ ನೀರು ಹರಿಸುವ ಯೋಜನೆ ಚರ್ಚೆಯಲ್ಲಿ ಮಾತ್ರ ಇದೆ. ಆದರೆ ಈ ಕುರಿತು ಸರ್ಕಾರದ ಮಟ್ಟದಲ್ಲಿ ಯಾವುದೇ ಅಧಿಕೃತ ನಿರ್ಧಾರವಾಗಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅಥಣಿಗೆ ಬಂದಾಗ ಮಾಹಾರಾಷ್ಟ್ರದ ಶಾಸಕರು ಈ ಬಗ್ಗೆ ಚರ್ಚಿಸಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿಗರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತೋ ಅಥವಾ ಕಾಂಗ್ರೆಸ್ ಸರ್ಕಾರವಿದ್ಧಾಗ ಹದಗೆಟ್ಟಿತ್ತೋ ಎನ್ನುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದ್ದಾರೆ. ಸರ್ಕಾರ ಒಂದು ವರ್ಷದ ಅವಧಿ ಯಶಸ್ವಿಯಾಗಿ ಪೂರೈಸಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ಅವಧಿಯಲ್ಲಿ ಹಾಗೂ ಕಾಂಗ್ರೆಸ್ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು ಎಂಬ ಬಗ್ಗೆ ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದ್ದಾರೆಂದು ಪ್ರತ್ಯುತ್ತರ ನೀಡಿದ್ದರು.

ಇನ್ನು ಲೋಕಸಭಾ ಚುನಾವಣೆಯ ಬಳಿಕ ಸಂಪುಟ ವಿಸ್ತರಣೆಯಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ನಂತರ ಯಾವುದೇ ಬದಲಾವಣೆ ಆಗಲ್ಲ. ಡಿಸಿಎಂ ಕೂಗು ಕೂಡ ಈಗ ಇಲ್ಲ. ಚುನಾವಣೆಕ್ಕಿಂತ ಮುಂಚೆ ಮಾಡಿದರೆ ಚುನಾವಣೆಯಲ್ಲಿ ಅನುಕೂಲ ಆಗತ್ತಿತ್ತು ಎಂಬುವುದು ನಮ್ಮ ನಿಲುವು ಆಗಿತ್ತು ಎಂದರು.
ಜನತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದರಲ್ಲಿ ನಮಕ್ಕಿಂತ ಅಧಿಕಾರಿಗಳ ಪಾತ್ರ ಮಹತ್ವದಿದೆ. ಅಧಿಕಾರಿಗಳು ನಾಲ್ಕು ಗೋಡೆಯಲ್ಲಿ ಕುಳಿತರೆ ಸಾಲದು, ಸಾರ್ವಜನಕರ ಸಮಸ್ಯೆಗೆ ಸ್ಪಂದಿಸಬೇಕು. ಅಧಿಕಾರಿಗಳನ್ನು ಸಾರ್ವಜನಿಕರೊಂದಿಗೆ, ಮಾಧ್ಯಮದವರು ಪ್ರಶ್ನಿಸಬೇಕು. ಬೆಳಗಾವಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ಪೌರಕಾರ್ಮಿಕರ ಬಾಕಿ ವೇತನ ನೀಡಲು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದೇನೆ ಎಂದು ತಿಳಿಸಿದ ಅವರು, ಇಸ್ಲಾಂಪುರದಲ್ಲಿ ನಡೆದ ರೈತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ. ಮೀಟರ್ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ದೂರು ನೀಡಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸುತ್ತೇನೆಂದರು.

ಈ ಸಂಧರ್ಭದಲ್ಲಿ ಶಾಸಕ ಆಸೀಫ್(ರಾಜು) ಸೇಠ್‌, ಮಾಜಿ ಸಚಿವ ವೀರಕುಮಾರ್ ಪಾಟೀಲ್, ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಬೆಳಗಾವಿ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ ಸೇರಿದಂತೆ ಹಲವು ಮುಖಂಡರು ಇದ್ದರು.

Related Articles

Back to top button