
ಪ್ರಗತಿವಾಹಿನಿ ಸುದ್ದಿ: ಆಮ್ ಆದ್ಮ ಪಕ್ಷದ ರಾಘವ್ ಚಡ್ಡಾ ನೇತೃತ್ವದಲ್ಲಿ ಏಳು ಮಂದಿ ರಾಜ್ಯಸಭಾ ಸಂಸದರು ಆಪ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ರಾಜ್ಯಸಭೆಯಲ್ಲಿ ಆಪ್ ಹೊಂದಿದ್ದ 10 ಸಂಸದರ ಪೈಕಿ 7 ಮಂದಿ (2/3 ಕ್ಕಿಂತ ಹೆಚ್ಚು) ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸುವ ಮೂಲಕ ತಮ್ಮ ಸಂಸದ ಸ್ಥಾನಕ್ಕೂ ಸಂಚಕಾರ ಬರದಂತೆ ಚಾಣಾಕ್ಷ ನಡೆ ಇಟ್ಟಿದ್ದಾರೆ.
ರಾಘವ್ ಚಡ್ಡಾ ಅವರೊಂದಿಗೆ ಹಿರಿಯ ನಾಯಕರಾದ ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ಕ್ರಿಕೆಟಿಗ ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್, ರಾಜೇಂದರ್ ಗುಪ್ತಾ ಮತ್ತು ವಿಕ್ರಮಜಿತ್ ಸಿಂಗ್ ಸಾಕ್ಷಿ ಅವರು ಬಿಜೆಪಿಗೆ ಸೇರ್ಪಡೆಯಾದ ಪ್ರಮುಖರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಘವ್ ಚಡ್ವಾ ಆಪ್ ನಾಯಕತ್ವದ ವಿರುದ್ಧ ತೀವ್ರ ಕಿಡಿಕಾರಿದರು. ನನ್ನ ರಕ್ತ ಮತ್ತು ಬೆವರಿನಿಂದ 15 ವರ್ಷಗಳ ಕಾಲ ಕಟ್ಟಿ ಬೆಳೆಸಿದ ಪಕ್ಷವು ಇಂದು ತನ್ನ ತತ್ವ ಸಿದ್ಧಾಂತಗಳಿಂದ ಸಂಪೂರ್ಣವಾಗಿ ದೂರ ಸರಿದಿದೆ. ಇದು ದೇಶಕ್ಕಾಗಿ ಕೆಲಸ ಮಾಡುವ ಬದಲು ಕೇವಲ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ. ನಾನು ತಪ್ಪು ಪಕ್ಷದಲ್ಲಿದ್ದ ಸರಿಯಾದ ವ್ಯಕ್ತಿ ಎಂದು ನನಗೆ ಅರಿವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.
ತಮ್ಮ ಸದಸ್ಯತ್ವ ರದ್ದಾಗದಂತೆ ತಡೆಯಲು ಸಂವಿಧಾನದ 10ನೇ ಅನುಸೂಚಿಯ (ಪಕ್ಷಾಂತರ ವಿರೋಧಿ ಕಾಯ್ದೆ) ಅಡಿಯಲ್ಲಿ 2/3 ರಷ್ಟು ಸಂಸದರು ಒಟ್ಟಾಗಿ ವಿಲೀನಗೊಳ್ಳುವ ಹಕ್ಕನ್ನು ಬಳಸಿಕೊಂಡಿದ್ದಾರೆ. ಈಗಾಗಲೇ ನಾವು ರಾಜ್ಯಸಭೆಯ ಸಭಾಪತಿಗಳಿಗೆ ಸಹಿ ಮಾಡಿದ ಪತ್ರವನ್ನು ಸಲ್ಲಿಸಿದ್ದೇವೆ’ ಎಂದು ಚಡ್ಡಾ ತಿಳಿಸಿದರು.
ಇತ್ತೀಚೆಗಷ್ಟೇ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಉಪ ನಾಯಕನ ಸ್ಥಾನದಿಂದ ಆಪ್ ತೆಗೆದುಹಾಕಿತ್ತು. ಅವರ ಜಾಗಕ್ಕೆ ಅಶೋಕ್ ಮಿತ್ತಲ್ ಅವರನ್ನು ನೇಮಿಸಲಾಗಿತ್ತು. ಆದರೆ, ಈಗ ಮಿತ್ತಲ್ ಅವರೂ ಕೂಡ ಚಡ್ಡಾ ಅವರೊಂದಿಗೆ ಬಿಜೆಪಿಗೆ ಸೇರಿದ್ದಾರೆ.


