Kannada NewsLatest

ಬೆಳಗಾವಿ:  ಖಾಸಗಿ ಆಸ್ಪತ್ರೆ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳ ದಾಳಿ

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ತಾಲ್ಲೂಕಿನ ಹಲಸಿ ಗ್ರಾಮದಲ್ಲಿ ಸಕ್ಷಮ ಪ್ರಾಧಿಕಾರದ ಪರವಾನಿಗೆ ಇಲ್ಲದೇ ನಡೆಸುತ್ತಿದ್ದ ಶಫಾ ಕ್ಲಿನಿಕ್ ಮತ್ತು ಆಸ್ಪತ್ರೆಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ ಕೆ.ಪಿ.ಎಂ.ಇ ಅಧಿಕಾರಿಗಳ ತಂಡ ನಿಯಮಬಾಹಿರವಾಗಿ ನಡೆಯುತ್ತಿದ್ದ ಖಾಸಗಿ ಆಸ್ಪತ್ರೆ ಸೀಜ್ ಮಾಡಿ ಆಸ್ಪತ್ರೆಯ ನಿರ್ವಾಹಕರಿಗೆ ನೋಟಿಸ್ ನೀಡಿದ ಘಟನೆ ಗುರುವಾರ ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ಎಲೆಕ್ಟ್ರೋ ಹೋಮಿಯೋಪತಿ ಕೋರ್ಸನ್ನು ಮುಗಿಸಿದ್ದ ಎಂ.ಐ ದೇವಡಿ ಎಂಬ ವ್ಯಕ್ತಿ ಕಳೆದ ಹಲವು ತಿಂಗಳುಗಳಿಂದ ಹಲಸಿಯಲ್ಲಿ ಶಫಾ ಆಸ್ಪತ್ರೆ ನಡೆಸುತ್ತ ರೋಗಿಗಳಿಗೆ ಉಪಚಾರ ನೀಡುತ್ತಿದ್ದರು. ತಮ್ಮ ಬಳಿ ಚಿಕಿತ್ಸೆಗಾಗಿ ಬರುತ್ತಿದ್ದ ರೋಗಿಗಳಿಗೆ ಅವರು ಆಲೋಪಥಿ ಪದ್ಧತಿಯಡಿ ಚಿಕಿತ್ಸೆ ನೀಡಿ ಉಪಚಾರ ನೀಡುತ್ತಿದ್ದರು. ಸ್ಥಳೀಯರು ಈ ಸಂಗತಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ಹಲಸಿಗೆ ತೆರಳಿ ಆಸ್ಪತ್ರೆಯ ಕಾರ್ಯವೈಖರಿ ಮತ್ತು ದಾಖಲೆಗಳನ್ನು ಪರಿಶೀಲಿಸಿತು.

Home add -Advt

ಪರಿಶೀಲನೆ ಸಂದರ್ಭದಲ್ಲಿ ಆಸ್ಪತ್ರೆ ನಡೆಸಲು ಪರವಾನಿಗೆ ಪಡೆದ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ಆಸ್ಪತ್ರೆಯ ನಿರ್ವಾಹಕ ವಿಫಲರಾದ ಕಾರಣ ಕೆಪಿಎಂಇ ನಿಯಮದಡಿ ಆಸ್ಪತ್ರೆಯನ್ನು ಸೀಜ್ ಮಾಡಲಾಯಿತು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ದಾಳಿ ಸಂದರ್ಭದಲ್ಲಿ ಜಿಲ್ಲಾ ಕೆಪಿಎಂಇ ನೋಡಲ್ ಅಧಿಕಾರಿ ಡಾ.ಎಂ.ವಿ ಕಿವಡಸಣ್ಣವರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ, ಟಿಎಚ್ಒ ಡಾ.ಸಂಜೀವ ನಾಂದ್ರೆ, ಆರೋಗ್ಯ ನಿರೀಕ್ಷಕ ಮಂಜುನಾಥ ಬಿಸನಳ್ಳಿ ಹಾಗೂ ಸಿಬ್ಬಂದಿ ಇದ್ದರು.

ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರ ಸ್ವೀಕಾರ

Related Articles

Back to top button