*ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ: ಅಂಚೆ ಮತಗಳ ಮರು ಎಣಿಕೆಯಲ್ಲಿಯೂ ಗೆಲುವು*

ಪ್ರಗತಿವಾಹಿನಿ ಸುದ್ದಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಗ್ನಿ ಪರೀಕ್ಷೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಗೆದ್ದು ಬೀಗಿದ್ದಾರೆ.
ಗಮನಾರ್ಹ ಸಂಗತಿಯೆಂದರೆ ಮರುಮತ ಎಣಿಕೆಯಲ್ಲಿ 2 ಮತ ಹೆಚ್ಚಾಗಿದ್ದು, ರಾಜೇಗೌಡ ಅವರು 203 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಇಂದು ಐಡಿಎಸ್ಜಿ ಕಾಲೇಜಿನಲ್ಲಿ ನಡೆಯಿತು. ಈ ಹಿಂದೆ ಸಾಮಾನ್ಯ ಮತ ಎಣಿಕೆ ಬಳಿಕ 201 ಮತಗಳಿಂದ ಗೆಲುವು ಸಾಧಿಸಿದ್ದ ರಾಜೇಗೌಡ ಅವರು, ಮರು ಮತ ಎಣಿಕೆ ಬಳಿಕ 203 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮೊದಲಿಗೆ 20 ಟ್ರಂಕ್ಗಳಲ್ಲಿ ಭದ್ರಗೊಳಿಸಿದ್ದ 1,822 ಅಂಚೆ ಮತಗಳ ಪೈಕಿ ಅಧಿಕಾರಿಗಳು ಬಂಡಲ್ನಂತೆ ಬೇರ್ಪಡಿಸಿದರು. ತಿರಸ್ಕೃತಗೊಂಡ 279 ಮತಗಳನ್ನ ಪ್ರತ್ಯೇಕವಾಗಿ ವಿಂಗಡಿಸಿ, ಉಳಿದ 1,540 ಮತಗಳನ್ನು 25 ಮತಪತ್ರಗಳನ್ನು ಒಂದು ಬಂಡಲ್ನಂತೆ ವಿಂಗಡಿಸಿದರು. ಈ ವೇಳೆ ಕೆಲವು ಟ್ರಂಕ್ಗಳು ಜಖಂಗೊಂಡಿರುವುದು ಕಂಡುಬಂದವು. ಸೀಲ್ ಇಲ್ಲದ ಟ್ರಂಕ್ ಕೂಡ ಪತ್ತೆಯಾದ ಹಿನ್ನೆಲೆ ಭಾರೀ ಹೈಡ್ರಾಮಾವೇ ನಡೆಯಿತು. ಕೊನೆಗೆ ಅಂಚೆಮತಗಳ ಟ್ರಂಕ್ ಸುಭದ್ರವಾಗಿದೆ. ಯಾವುದೇ ಗೊಂದಲ ಇಲ್ಲವೆಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ ಬಳಿಕ ಮತ ಎಣಿಕೆಗೆ ಅನುವು ಮಾಡಿಕೊಟ್ಟರು. ಬಳಿಕ ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಮರು ಎಣಿಕೆ ಪ್ರಕ್ರಿಯೆ ನಡೆಯಿತು. ಅಂತಿಮವಾಗಿ ಕಾಂಗ್ರೆಸ್ ನ ರಾಜೇಗೌಡ ಅವರೇ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಶಾಸಕ ಸ್ಥಾನ ಭದ್ರವಾಗಿದೆ.



