
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಕುರುಬ ಸಮಾಜದಿಂದಲೇ ಕುರುಬ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಕೇಳಿ ಬಂದಿದೆ.
ಗ್ರಾಮದಲ್ಲಿ ಇರುವ ದೇವಸ್ಥಾನದ ಪೂಜೆ ಮಾಡುವ ವಿಚಾರಕ್ಕೆ ಹಾಗೂ ಅನ್ಯ ಜಾತಿಯವರ ಜೊತೆ ಪ್ರೀತಿ ವಿಚಾರಕ್ಕೆ ಕುರುಬ ಸಮಾಜದೊಳಗಿನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಕೊಂಡಸಕೊಪ್ಪ ಗ್ರಾಮದ ಸಾಂಬ್ರೆಕರ್ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದ್ದು, ನಮಗೂ ಬದುಕಲು ಅವಕಾಶ ಕೊಡಿ ಎಂದು ಬಹಿಸ್ಕಾರಕ್ಕೆ ಒಳಗಾದ ಸಾಂಬ್ರೆಕರ್ ಕುಟುಂಬ ಮನವಿ ಮಾಡಿಕೊಳ್ಳುತ್ತಿದೆ.
ಈ ಬಗ್ಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಹದಿನೈದು ದಿನವಾದ್ರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜೀವ ಭಯದಲ್ಲಿ ಬದುಕುತ್ತಿರುವ ಕುಟುಂಬಕ್ಕೆ ಅಭದ್ರತೆ ಕಾಡುತ್ತಿದ್ದು, ಊರು ಬಿಡಿಸುತ್ತೇವೆ ಎಂದು ಗ್ರಾಮದ ಪಂಚರಿಂದ ಧಮ್ಕಿ ಹಾಕಲಾಗುತ್ತಿದೆ. ಕುಟುಂಬದ ಜೊತೆ ಯಾರಾದ್ರು ಅಪ್ಪಿತಪ್ಪಿ ಮಾತನಾಡಿದ್ರೆ 5000 ರೂ. ದಂಡ, ಕಟ್ಟಬೇಕು. ಮಾತನಾಡುವವರ ಮಾಹಿತಿ ಕೊಟ್ಟರೆ 1000 ರೂ. ಬಹುಮಾನ ಘೋಷಣೆ ಮಾಡಲಾಗಿದೆ.
ಐದು ವರ್ಷದ ಮಗುವಿನ ಜೊತೆಯೂ ಗ್ರಾಮಸ್ಥರು ಮಾತನಾಡುತ್ತಿಲ್ಲ. ಮದುವೆ, ಕಾರ್ಯಕ್ರಮಗಳಿಗೆ ಯಾರೂ ಆಹ್ವಾನ ಕೊಡುತ್ತಿಲ್ಲ. ತಡರಾತ್ರಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ ಎಂದು ಸಾಂಬ್ರೆಕರ್ ಕುಟುಂಬಸ್ಥರು ಆರೋಪಿಸಿದ್ದಾರೆ.



