*ಬೆಳಗಾವಿ ಪರ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ: ಚಂದ್ರಶೇಖರ ಶ್ರೀ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ಗೊತ್ತುವಳಿಯನ್ನು ಮಂಡಿಸಬೇಕು ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಳೆದ ಏ.13ರಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಭೆಯಾದರೂ ಕೂಡ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವ್ ಪಾಸ್ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ 20 ಕನ್ನಡ ಸಂಘಟನೆಗಳು ಹೋರಾಟ ಮಾಡಿದರೂ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳದಿರುವುದು ದೊಡ್ಡ ದುರಂತ ಎಂದಿದ್ದಾರೆ.
ಬೆಳಗಾವಿ ನಮ್ಮ ಹಕ್ಕು ಮಹಾನಗರ ಪಾಲಿಕೆಯಲ್ಲಿ ಕನ್ನಡಿಗರೇ ಮೇಯರ್, ಉಪಮೇಯರ್ ಇದ್ದರೂ ಕನ್ನಡ ಗೊತ್ತುವಳಿ ಅಂಗೀಕರಿಸದಿರುವುದು ಯೋಗ್ಯವಲ್ಲ. ಬೆಳಗಾವಿ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಇದು ಎರಡನೇ ರಾಜಧಾನಿಯಾಗಿದೆ. ಪಾಲಿಕೆ ಕನ್ನಡ ಗೊತ್ತುವಳಿ ನಿರ್ಣಯವನ್ನು ಕೈಗೊಳ್ಳದಿದ್ದರೇ ಸ್ವಾಮೀಜಿಗಳು ಹೋರಾಟ ಕೈಗೊಳ್ಳಬೇಕಾಗುತ್ತದೆ. ಕನ್ನಡ ಸಂಘಟನೆಯ ಕಾರ್ಯಕ್ಕೆ ಸದಾ ನಮ್ಮ ಬೆಂಬಲ ಇದೆ ಎಂದರು.




